ಬೆಂಗಳೂರು: ಇತ್ತೀಚಿಗೆ ಕರ್ನಾಟಕದ ಹಲವು ಭಾಗಗಳಲ್ಲಿ ವಿಪರೀತ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾದ ನಷ್ಟದ ಬಗ್ಗೆ ಅಧ್ಯಯನ ನಡೆಸಲು ನಾಳೆ(ಸೆ.5) ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ(NDRF)ಯ ತಂಡಗಳು ರಾಜ್ಯಕ್ಕೆ ಭೇಟಿ ನೀಡಲಿವೆ. ಸೆಪ್ಟೆಂಬರ್ 5 ಮತ್ತು 6 ನೇ ತಾರೀಕು ಎರಡು ದಿನ ಎನ್ಡಿಆರ್ಎಫ್ ತಂಡ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ನೆರೆ ಹಾನಿ ಸಂಬಂಧ ಅಧ್ಯಯನ ನಡೆಸಲಿವೆ.
ರಾಜ್ಯದಲ್ಲಿ ಮಳೆಯಿಂದ 5600 ಕೋಟಿ ರೂಪಾಯಿ ನಷ್ಟವಾಗಿದೆ. ಎನ್ಡಿಆರ್ಎಫ್ನ ಪರಿಹಾರಕ್ಕಾಗಿ 765 ಕೋಟಿ ರೂ.ಗಳ ಬೆಳೆಹಾನಿಯಾಗಿದೆ ಎಂದು ಅಂದಾಜು ಮಾಡಿ ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ತಂಡಗಳು ರಾಜ್ಯದ ಕಂದಾಯ ಅಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಿವೆ. ಹಾನಿಯಾದ ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹಾಲಿ, ಮಾಜಿ ಶಾಸಕರ ಮೇಲೆ ದೂರು, ಪ್ರತಿದೂರು ದಾಖಲು!
ಎನ್ಡಿಆರ್ಎಫ್ನ ಮೂರು ತಂಡಗಳು ಆಗಮಿಸಲಿದ್ದು, ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಹಾನಿ ಬಗ್ಗೆ ಅಧ್ಯಯನ ನಡೆಸಲಿವೆ. ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಒಂದು ತಂಡ, ಧಾರವಾಡ, ಬಾಗಲಕೋಟೆಗೆ ಮತ್ತೊಂದು ತಂಡ ಮತ್ತು ಬೆಳಗಾವಿಗೆ ಒಂದು ತಂಡ ಪ್ರತ್ಯೇಕವಾಗಿ ಭೇಟಿ ನೀಡಲಿವೆ ಎನ್ನಲಾಗಿದೆ.