ನವದೆಹಲಿ: ಬಿಹಾರ ಚುನಾವಣಾ ಗೆಲುವಿನ ಸಂಭ್ರಮದ ನಿಮಿತ್ತ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಹಾಗೇ ಬಿಹಾರದ ಜನತೆಗೆ ಧನ್ಯವಾದ ತಿಳಿಸಿದರು.
ಈ 21ನೇ ಶತಮಾನದಲ್ಲಿ ಅಭಿವೃದ್ಧಿಯೇ ರಾಷ್ಟ್ರ ರಾಜಕಾರಣದ ಮೂಲಮಂತ್ರ ಎಂದು ಜನರೇ ನಿರ್ಧರಿಸಿದ್ದಾರೆ. ದೇಶದ ಅಭಿವೃದ್ಧಿಗಾಗಿ ಯಾವ ಪಕ್ಷ ನಿರಂತರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯೋ, ಅದನ್ನೇ ಜನರು ಗೆಲ್ಲಿಸುತ್ತಿದ್ದಾರೆ ಎಂದು ಮೋದಿಯವರು ಹೇಳಿದರು.
ಮಹಿಳಾ ಮತದಾರರನ್ನು ಸೈಲೆಂಟ್ ಮೆಜಾರಿಟಿ ಎಂದು ಕರೆದ ಪ್ರಧಾನಿಯವರು, ಈ ದೇಶದ ಮಹಿಳೆಯರು ಎಲ್ಲ ರೀತಿಯ ಚುನಾವಣೆಯಲ್ಲೂ ಬಿಜೆಪಿಯನ್ನು ಮೌನವಾಗಿಯೇ ಬೆಂಬಲಿಸುತ್ತಿದ್ದಾರೆ. ಉಜ್ವಲಾ ಯೋಜನೆಯಿಂದ ಹಿಡಿದು, ಗೃಹಕ್ಕೆ ಸಂಬಂಧಪಟ್ಟ ಎಲ್ಲ ಯೋಜನೆಗಳ ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ. ಅವರೂ ಸಹ ಎನ್ಡಿಎಗೇ ಮತ ಹಾಕುತ್ತಿದ್ದಾರೆ. ಬಿಹಾರದ ಈ ಉಪಚುನಾವಣೆಯಲ್ಲೂ ಅದೇ ಪುನರಾವರ್ತನೆಯಾಗಿದೆ ಎಂದರು.
ಬಿಹಾರವಷ್ಟೇ ಅಲ್ಲದೆ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ್, ಮಣಿಪುರ ಉಪಚುನಾವಣೆಗಳಲ್ಲೂ ಬಿಜೆಪಿ ಗೆದ್ದಿದ್ದು, ಸ್ಥಳೀಯ ಮುಖಂಡರು ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎನ್ನುತ್ತಿದ್ದಾರೆ. ಅದರಲ್ಲೂ ಬಿಹಾರ ಉಪಚುನಾವಣೆಯಲ್ಲಿ ಜಿದ್ದಾಜಿದ್ದಿ ಹೆಚ್ಚಾಗಿತ್ತು. ಎನ್ಡಿಎ ವಿರುದ್ಧ ಮಹಾಘಟ್ಬಂಧನ್ ರಚಿತವಾಗಿತ್ತು. ಆದರೂ ಸಹ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ 125 ಕ್ಷೇತ್ರಗಳಲ್ಲಿ ಎನ್ಡಿಎ ಗೆಲುವು ಸಾಧಿಸಿದೆ.
ಅದರಲ್ಲೂ ಬಿಜೆಪಿ ಪಾಲಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಮುಖ್ಯ ಪ್ರಚಾರಕರಾಗಿದ್ದಾರೆ. ಬಿಹಾರದ ಮೂರು ಹಂತದ ಚುನಾವಣೆ ನಿಮಿತ್ತ ಮೋದಿಯವರು ಒಟ್ಟು 12 ರ್ಯಾಲಿಗಳನ್ನು ನಡೆಸಿದ್ದರು. (ಏಜೆನ್ಸೀಸ್)