ನವದೆಹಲಿ: ಪಂಚರಾಜ್ಯಗಳ ಮತದಾನಕ್ಕೆ ಗುರುವಾರ ತೆರೆ ಬಿದ್ದ ಬೆನ್ನಲ್ಲೇ ವಿವಿಧ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶಗಳು ಹೊರಬಿದ್ದಿವೆ. ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಬಿಜೆಪಿ, ಎಐಎಡಿಎಂಕೆ ಮತ್ತು ರಂಗಸ್ವಾಮಿ ಕಾಂಗ್ರೆಸ್ ಒಳಗೊಂಡ ಎನ್ಡಿಎ ಮೈತ್ರಿ ಚುನಾವಣೆ ಗೆದ್ದು ಎನ್. ರಂಗಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ.
ಪುದುಚೇರಿಗೆ ಚುನಾವಣೆ ಘೋಷಣೆಯಾಗುವ ಕೆಲ ದಿನಗಳ ಮುನ್ನ ಅಲ್ಲಿ ಸರ್ಕಾರ ಪತನಗೊಂಡಿತ್ತು. ಸಿಎಂ ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ತೊರೆದಿದ್ದ ಅನೇಕ ಶಾಸಕರು ಎಐಎಡಿಎಂಕೆ ಸೇರಿದ್ದರು. ಒಟ್ಟು 30 ಸೀಟುಗಳಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಅತಿ ಹೆಚ್ಚು ಸ್ಥಾನ ಪ್ರಾಪ್ತಿಯಾಗಿ ಅದರಲ್ಲಿ ರಂಗಸ್ವಾಮಿ ಕಾಂಗ್ರೆಸ್ 10ಕ್ಕಿಂತಲೂ ಹೆಚ್ಚು ಸೀಟು ಬಾಚಿಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ದೇವರ ನಾಡು ಕೇರಳದಲ್ಲಿ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಚುನಾವಣೆ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತೊಂದು ಅವಧಿಗೆ ವಿಪಕ್ಷ ಸ್ಥಾನದಲ್ಲಿ ಕೂರುವುದು ಅನಿವಾರ್ಯವಾಗಲಿದೆ. ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದರೂ, ಕೇರಳದ ಮತದಾರ ಮತ್ತೊಂದು ಅವಕಾಶ ನೀಡುತ್ತಿರುವುದು ವಿಶೇಷ. ಒಂದು ಶಾಸಕ ಸ್ಥಾನ ಹೊಂದಿದ್ದ ಬಿಜೆಪಿ ಏಳೆಂಟು ಸೀಟು ಗೆಲ್ಲುವ ನಿರೀಕ್ಷೆ ಹೊಂದಿದ್ದರೂ, ಸಮೀಕ್ಷೆಗಳು ಐದಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಿಲ್ಲ. ಕೆಲ ಸಮೀಕ್ಷೆಗಳು 2-3 ಸೀಟುಗಳನ್ನು ಬಿಜೆಪಿ ಗೆಲ್ಲಬಹುದಷ್ಟೇ ಎಂದು ತಿಳಿಸಿವೆ.
ಎಕ್ಸಿಟ್ ಪೋಲ್: ಡಿಎಂಕೆ ತೆಕ್ಕೆಗೆ ತಮಿಳುನಾಡು; ಸಿಎಂ ಆಗ್ತಾರಾ ಕರುಣಾನಿಧಿ ಪುತ್ರ ಸ್ಟಾಲಿನ್?
ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿಯದ್ದೇ ದರ್ಬಾರ್! ಆದರೆ 3ರಿಂದ 115ಕ್ಕೇರಿದ ಬಿಜೆಪಿ ಬಲ!