ನಾಯಕನಹಟ್ಟಿ: ಸಂಕಷ್ಟದಲ್ಲಿರುವ ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕಿನ ಅರ್ಚಕರಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಿಂದ ಗುರುವಾರ ದಿನಸಿ ಕಿಟ್ ನೀಡಲಾಯಿತು.
ಇಒ ಎಸ್.ಪಿ.ಬಿ.ಮಹೇಶ್ ಮಾತನಾಡಿ, ಲಾಕ್ಡೌನ್ನಿಂದ ಬಿ ಮತ್ತು ಸಿ ದರ್ಜೆಯ ದೇವಾಲಯಗಳ ಅರ್ಚಕರು ಸಂಕಷ್ಟದಲ್ಲಿದ್ದು, ಇವರಿಗೆ ನೆರವಾಗುವಂತೆ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಚಳ್ಳಕೆರೆ ತಾಲೂಕಿನ 38 ಹಾಗೂ ಚಿತ್ರದುರ್ಗ ತಾಲೂಕಿನ 100 ಬಿ ಮತ್ತು ಸಿ ದರ್ಜೆಯ ದೇವಾಲಯಗಳ ಅರ್ಚಕರಿಗೆ ಆಹಾರ ಪದಾರ್ಥಗಳ ಕಿಟ್ ನೀಡಲಾಗುತ್ತಿದೆ ಎಂದರು.
ಕಿಟ್ಗಳನ್ನು ಆಯಾ ತಾಲೂಕಿನ ಮುಜರಾಯಿ ಅಧಿಕಾರಿಗಳಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್, ಸದಸ್ಯರಾದ ಎನ್.ಬಿ.ಮುನಿಯಪ್ಪ, ಎಸ್ವಿಟಿ ರೆಡ್ಡಿ, ರುದ್ರಮುನಿ, ನಾಗಣ್ಣ, ಹಂಸವೇಣಿ, ಲಲಿತಮ್ಮ, ಗೋವಿಂದರಾಜ್, ಸಿಬ್ಬಂದಿ ಸತೀಶ್ ಮತ್ತಿತರರಿದ್ದರು.
ಇಂದು ವಿತರಣೆಗೆ ಕ್ರಮ: ಚಿತ್ರದುರ್ಗ: ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿ ದೇವಾಲಯಗಳ ಅರ್ಚಕರು ಮತ್ತು ಸಿಬ್ಬಂದಿಗೆ ಆಹಾರ ಕಿಟ್ ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನ, ವದ್ದೀಕೆರೆ ಕಾಲಭೈ ರವೇಶ್ವರಸ್ವಾಮಿ ದೇವಸ್ಥಾನ ಹಾಗೂ ಹೊಸದುರ್ಗ ಗವಿರಂಗಾಪುರದ ಗವಿರಂಗನಾಥಸ್ವಾಮಿ ದೇವಸ್ಥಾನಗಳಿಂದ ಜಿಲ್ಲಾ ವ್ಯಾಪ್ತಿಯಲ್ಲಿರುವ 299 ಸಿ ವರ್ಗದ ಮುಜರಾಯಿ ದೇವಾಲಯಗಳ ಅರ್ಚಕರು ಮತ್ತು ಇತರೆ ಸಿಬ್ಬಂದಿಗೆ 429 ಆಹಾರದ ಕಿಟ್ಗಳನ್ನು ಶುಕ್ರವಾರ ವಿತರಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.