More

    22ರಿಂದ ಎಡನೀರಿನಲ್ಲಿ ರಾಷ್ಟ್ರೀಯ ಕಾವ್ಯ ಕಮ್ಮಟ, ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ

    ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದಲ್ಲಿ ಮೊದಲ ಬಾರಿಗೆ ಸೆ.22ರಿಂದ ಮೂರು ದಿನಗಳ ರಾಷ್ಟ್ರಮಟ್ಟದ ಕಾವ್ಯ ಕಮ್ಮಟವನ್ನು ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. 60 ಶಿಬಿರಾರ್ಥಿಗಳಿರುವ ಈ ಕಮ್ಮಟದ ನಿರ್ದೇಶಕರಾಗಿ ಹಿರಿಯ ಕವಿ ಡಾ.ವಸಂತಕುಮಾರ ಪೆರ್ಲ ಕಾರ್ಯನಿರ್ವಹಿಸುವರು.


    ಗುರುವಾರ ಬೆಳಗ್ಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಿರಿಯ ಕವಯಿತ್ರಿ ವಿಜಯಪುರದ ಸರಸ್ವತಿ ಚಿಮ್ಮಲಗಿ ಕಮ್ಮಟ ಉದ್ಘಾಟಿಸಲಿದ್ದು, ಕವಿ ಡಾ.ರಮಾನಂದ ಬನಾರಿ ಮತ್ತು ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅನುವಾದಕ ಪಿ.ಎನ್.ಮೂಡಿತ್ತಾಯ, ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್, ಸದಸ್ಯ ಸಂಚಾಲಕರಾದ ದೀಪ್ತಿ ಭದ್ರಾವತಿ ಮತ್ತು ಕೇಶವ ಬಂಗೇರ ಉಪಸ್ಥಿತರಿರುವರು. ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅಧ್ಯಕ್ಷತೆ ವಹಿಸುವರು.


    ಮೂರು ದಿನಗಳ ಕಮ್ಮಟದಲ್ಲಿ ಡಾ.ಯು.ಮಹೇಶ್ವರಿ, ಡಾ.ವಸಂತಕುಮಾರ ಪೆರ್ಲ, ಬಿ.ಆರ್.ಸೂರಜ್, ಸರಸ್ವತಿ ಚಿಮ್ಮಲಗಿ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಡಾ.ಧನಂಜಯ ಕುಂಬಳೆ, ನಾಗರಾಜ ತಲಕಾಡು, ಸುಬ್ಬು ಹೊಲೆಯಾರ್, ಡಾ.ಎಚ್.ಎಂ.ಚೆನ್ನಪ್ಪಗೋಳ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
    ಶನಿವಾರ ಮಧ್ಯಾಹ್ನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಕವಿ ಬಿ.ಆರ್. ಲಕ್ಷ್ಮಣ ರಾವ್ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಸುಬ್ಬು ಹೊಲೆಯಾರ್ ಮುಖ್ಯ ಅತಿಥಿಯಾಗಿದ್ದು, ಡಾ.ವಸಂತಕುಮಾರ ಪೆರ್ಲ ಕಮ್ಮಟದ ಪರಿಣಾಮಗಳ ಬಗ್ಗೆ ಮಾತನಾಡುವರು. ಜಿಲ್ಲಾ ಲೇಖಕರ ಸಂಘದ ಕಾರ್ಯದರ್ಶಿ ಪಿ.ಎನ್.ಮೂಡಿತ್ತಾಯ ಮೊದಲಾದವರು ಭಾಗವಹಿಸಲಿದ್ದಾರೆ.

    ಕವಿಯೊಂದಿಗೆ ಸಂವಾದ: ಶನಿವಾರ ಮಧ್ಯಾಹ್ನ ಕವಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಬಿ.ಆರ್.ಲಕ್ಷ್ಮಣ ರಾವ್ ಭಾಗವಹಿಸುವರು. ಮೂರು ದಿನವೂ ಗಂಪು ಚರ್ಚೆ, ಕಾವ್ಯರಚನೆ, ಕವಿಗೋಷ್ಠಿ ಮೊದಲಾದ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರ ಸಾಯಂಕಾಲ ಗಣಪತಿ ಭಟ್ ಪದ್ಯಾಣ ಮತ್ತು ಮುಳಿಯ ಶಂಕರ ಭಟ್ ಅವರಿಂದ ಗಮಕ ವಾಚನ ಮತ್ತು ವ್ಯಾಖ್ಯಾನ ಹಮ್ಮಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts