ಚಿಕ್ಕೋಡಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಕಾದ್ರೊಳ್ಳಿ ಹೇಳಿದರು.
ತಾಲೂಕಿನ ಶಿರಗಾಂವ ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡಲು ಕೂಸಿನ ಮನೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಕ್ಕೋಡಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಉತ್ತಮ ಪ್ರಗತಿಯಲ್ಲಿದ್ದು, ಈ ಯೋಜನೆಯಲ್ಲಿ ಮಹಿಳೆಯರು ಹೆಚ್ಚು ಭಾಗವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೂಸಿನ ಮನೆ ನೋಡಲ್ ಅಧಿಕಾರಿ ಶಿವಾನಂದ ಶಿರಗಾಂವಿ ಮಾತನಾಡಿ, ಕೂಸಿನ ಮನೆ ನರೇಗಾ ಕೂಲಿ ಕಾರ್ಮಿಕರಿಗೆ ಬಹಳ ಅನುಕೂಲವಾಗಿದೆ. ನಿರ್ಭಯದಿಂದ ತಮ್ಮ ಮೂರು ವರ್ಷದ ಒಳಗಿನ ಮಕ್ಕಳನ್ನು ಈ ಕೂಸಿನ ಮನೆಯಲ್ಲಿ ಬಿಟ್ಟು ಹೋಗಬಹುದು. ಈಗಾಗಲೇ ಕೂಸಿನ ಮನೆ ನಿರ್ವಹಣೆಗಾಗಿ ಕೇರ್ ಟೇಕರ್ಸ್ ತರಬೇತಿ ನೀಡಲಾಗಿದ್ದು, ಅವರು ಮಕ್ಕಳ ಆರೈಕೆ ಮತ್ತು ಪೌಷ್ಟಿಕ ಆಹಾರ ನೀಡುವುದರ ಮೂಲಕ ಮಕ್ಕಳ ಬೆಳವಣಿಗೆ ಹೆಚ್ಚು ಸುಧಾರಣೆ ಕಾಣಬಹುದು.
ಚಿಕ್ಕೋಡಿ ತಾಲೂಕಿನಲ್ಲಿ 15 ಕೂಸಿನ ಮನೆಗಳನ್ನು ಆಯ್ಕೆ ಮಾಡಲಾಗಿದೆ ಎಂದರು. ಗ್ರಾಪಂ ಅಧ್ಯಕ್ಷೆ ಜೈಬುನ್ನಿಸಾ ಸರದಾರ ತಾಸೀಲ್ದಾರ್, ಉಪಾಧ್ಯಕ್ಷ ಭೀಮಾ ಬಂಡು ಉದಗಟ್ಟಿ, ಪಿಡಿಒ ರೇಖಾ ಬೆಳಕುಡೆ, ಕಾರ್ಯದರ್ಶಿ ಕೆ.ಬಿ.ಪಡೋಲಕರ, ಐಇಸಿ ಸಂಯೋಜಕ ರಂಜಿತ ಕಾರ್ಣಿಕ, ಟಿ.ಸಿ.ಮುದ್ದಸೀರ್ ಪಠಾಣ, ತಾಂತ್ರಿಕ ಸಂಯೋಜಕ ಶಶಿಕಾಂತ ಕಾಂಬಳೆ, ಬಿಎಫ್ಟಿ ಅಜ್ಜಪ್ಪ ತಳವಾರ ಇತರರು ಇದ್ದರು.