ಹಗರಿಬೊಮ್ಮನಹಳ್ಳಿ: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕಿನ ಮುಟುಗನಹಳ್ಳಿ ಕೆರೆ ಕಾಮಗಾರಿ ಸ್ಥಳದಲ್ಲಿ ಗುರುವಾರ ನರೇಗಾ ಕೂಲಿ ಕಾರ್ಮಿಕರು ತಾಪಂ ಇಒ ಜಿ.ಪರಮೇಶ್ವರಗೆ ಮನವಿ ಸಲ್ಲಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯ ವನಜಾಕ್ಷಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೆಲಸ ಮಾಡಿದ ಬಾಕಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ವಿಪರೀತ ಬಿಸಿಲು ಇರುವ ಕಾರಣ ನರೇಗಾ ಯೋಜನೆಯಲ್ಲಿ ಎರಡು ಹಂತದ ಹಾಜರಾತಿ ರದ್ದು ಮಾಡಿ ಒಂದೇ ಸಲ ಹಾಜರಾತಿ ಪಡೆಯುವ ಸೌಲಭ್ಯ ಕಲ್ಪಿಸಬೇಕು.
ಈಗಾಗಲೇ ಏಪ್ರಿಲ್ನಲ್ಲಿ ನರೇಗಾ ಕೆಲಸದ ವೇಳೆ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬದವರಿಗೆ ಸರ್ಕಾರ 2 ಲಕ್ಷ ರೂ. ಬದಲಿಗೆ 5 ಲಕ್ಷ ರೂ. ನೀಡಬೇಕು. ಎನ್ಎಂಎಂಎಸ್ ತಂತ್ರಾಶದಲ್ಲಿ ಹಾಜರಾತಿ ಡಿಲಿಟ್ ಮಾಡುವ ಅವಕಾಶ ನೀಡಬೇಕು. ನರೇಗಾ ಕೂಲಿ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರ ಕಾರ್ಡ್ ವಿತರಿಸಬೇಕು ಎಂದು ಒತ್ತಾಯಿಸಿದರು.
ಕೂಲಿ ಕಾರ್ಮಿಕರಾದ ವಸಂತಮ್ಮ, ಪ್ರಕಾಶ, ಹುಲುಗಪ್ಪ, ದುರುಗಪ್ಪ, ವಿ.ಪ್ರಹ್ಲಾದ್, ತಿಮ್ಮಪ್ಪ, ಶ್ರೀಕಾಂತ್, ಲಕ್ಷ್ಮೀ, ವಿಜಯ, ಸಂಜಯ್, ಕರಿಬಸಪ್ಪ, ನಾಗಪ್ಪ, ದುರುಗೇಶ್, ಪರಮೇಶ್, ಶಿವಾನಂದ ಸ್ವಾಮಿ, ಲೋಕಪ್ಪ, ಉಷಾ, ಸಾರಾಂಬಿ, ವರ್ಜಾನ್, ಸಂಘಟನೆಯ ಪ್ರಮುಖರಾದ ಎಚ್.ದುರುಗಪ್ಪ, ಅಕ್ಕಮಹಾದೇವಿ ಇದ್ದರು.