ಬೆಂಗಳೂರು: ನಂದಿನಿ, ಅಮುಲ್ ವೀಲನ ಮಾಡುವ ಬಗ್ಗೆ ಅಮಿತ್ ಹೇಳಿಕೆ ವಿಚಾರ ವಿವಾದಕ್ಕೆ ಕಾರಣವಾಗಿದ್ದು ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಂದಿನಿ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆಯಾಗಿದ್ದು, ಇದನ್ನು ಅಮೂಲ್ ಜೊತೆ ವಿಲೀನ ಮಾಡುವ ಬಗ್ಗೆ ಇತ್ತೀಚೆಗೆ ಅಮಿತ್ ಷಾ ಮಾತನಾಡಿದ್ದಾರೆ ಎಂದು ಆಪಾದಿಸಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದು ನಂದಿನಿ ಮತ್ತು ಅಮೂಲ್ ವಿಲೀನ ಆಗಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬೊಮ್ಮಾಯಿ ‘ತಪ್ಪು ಕಲ್ಪನೆ, ಊಹೆ ಮಾಡಿ ಟೀಕೆ ಮಾಡೋರಿಗೆ ಏನ್ ಹೇಳೋದು..? ಅಮಿತ್ ಶಾ ಮಾತನಾಡಿದ್ದು ಸ್ಪಷ್ಟವಾಗಿದೆ. ಒಬ್ಬರಿಗೊಬ್ಬರು ಸಹಕಾರ ಮಾಡಿಕೊಂಡು ಬೆಳೆಯಬೇಕು ಎಂದು ಅವರು ಹೇಳಿದ್ದಾರೆ. ತಾಂತ್ರಿಕವಾಗಿ ಹಾಗೂ ಮಾರ್ಕೆಟಿಂಗ್ನಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಎರಡೂ ದೊಡ್ಡ ಸಂಸ್ಥೆಗಳು ಜೊತೆ ಜೊತೆಗೆ ಕೆಲಸ ಮಾಡಬೇಕು. ಅದರ ಅರ್ಥ ನಂದಿನಿ ಅಮೂಲ್ ಜೊತೆಗೆ ವಿಲೀನ ಆಗುತ್ತೆ ಅಂತ ಅಲ್ಲ.
ನಂದಿನಿ ಅಸ್ತಿತ್ವ ಇದ್ದೆ ಇರುತ್ತೆ. ಇನ್ನೂ 100 ವರ್ಷ ಹೋದ ನಂತರವೂ ನಂದಿನಿ ಶಾಶ್ವತವಾಗಿ ಇದ್ದೆ ಇರುತ್ತೆ. ಕೆಲವು ಏರಿಯಾದಲ್ಲಿ ಒಟ್ಟಾಗಿ ಕೆಲಸ ಮಾಡಿದರೆ ನಮಗೂ ಲಾಭ ಇದೆ. ಇದಕ್ಕೆ ತಪ್ಪು ಅರ್ಥ ಕೊಡಬಾರದು. ಜೊತೆಗೆ ಕೆಲಸ ಮಾಡುವುದರ ಅರ್ಥ ವಿಲೀನ ಅಥವಾ ಮರ್ಜ್ ಮಾಡೋದು ಅಂತ ಅಲ್ಲ. ಅವರದ್ದು ಅಮುಲ್ ಆಗಿಯೇ ಇರುತ್ತೆ. ನಮ್ಮ ನಂದಿನಿ ನಮ್ಮದಾಗಿ ಇರುತ್ತೆ. ತಪ್ಪು ಅರ್ಥವನ್ನು ಕಲ್ಪನೆ ಮಾಡುವ ಅವಶ್ಯಕತೆ ಇಲ್ಲ’ ಎಂದಿದ್ದಾರೆ.