ವಿಜಯವಾಣಿ ಸುದ್ದಿಜಾಲ ನಂದಗುಡಿ
ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶ ನಮ್ಮದಾಗಿದೆ. ಶ್ರೇಷ್ಠ ಮಾನವೀಯ ಮೌಲ್ಯ ಪ್ರತಿಬಿಂಬಿಸುವ ಧ್ಯೋತಕವಾಗಿ ಇಡೀ ಜಗತ್ತಿನ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಸಂಘಮಿತ್ರ ಶಾಲಾ ಸಂಸ್ಥಾಪಕ ಅಧ್ಯಕ್ಷ ಡಾ.ಸಿ.ಬೈರಪ್ಪ ಹೇಳಿದರು.
ನಂದಗುಡಿಯ ಸಂಘಮಿತ್ರ ಅನುದಾನಿತ ಶಾಲಾ ಅವರಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು.
ಸರ್ವರಿಗೂ ಸಮಪಾಲು, ಸಮಬಾಳು ಎಂಬ ಧ್ಯೇಯ ರೂಢಿಸಿಕೊಂಡಿರುವ ಜಗತ್ತಿನ ಏಕೈಕ ದೇಶ ಭಾರತ. ದೇಶ ಸ್ವಾತಂತ್ರ್ಯ ಪಡೆದ ನಂತರ ನಮ್ಮದೇ ಆದ ಲಿಖಿತ ಸಂವಿಧಾನ ರಚಿಸಿಕೊಂಡು ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದೆ. ಭಾರತೀಯ ವಿದ್ಯಾರ್ಥಿಗಳನ್ನು ಸೆಳೆಯಲು ಜಾಗತಿಕ ಸಂಸ್ಥೆಗಳು ಪೈಪೋಟಿಗಿಳಿದಿವೆ. ದೇಶದ ಶೈಕ್ಷಣಿಕ ವ್ಯವಸ್ಥೆ ಜಗತ್ತನ್ನೇ ತನ್ನತ್ತ ಸೆಳೆಯುತ್ತಿದೆ. ಭಾರತ ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರಗಳ ಸಾಲಿಗೆ ಸೇರಿದೆ. ಭಾರತೀಯರು ಮಾಹಿತಿ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕ ಎನ್.ಜಿ.ಸೋಮಶೇಖರ್ ಮಾತನಾಡಿ, ದೇಶಕ್ಕೆ ಸಂವಿಧಾನ ರಚಿಸಿಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಧ್ಯೇಯ ಆದರ್ಶಗಳನ್ನು ಸ್ಮರಿಸುವುದು, ಸಮಾನ ನಾಗರಿಕರಾಗಿ ಭವ್ಯ ಪರಂಪರೆ, ಸಂಸ್ಕೃತಿ ಉಳಿಸಿ ಬೆಳಸಬೇಕಾಗಿದೆ. ಸಮಾಜದ ಅಸ್ಪೃಶ್ಯತೆ, ಜಾತೀಯತೆ ಬದಿಗಿರಿಸಿ, ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ತ್ಯಾಗವನ್ನು ಸ್ಮರಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಬಲವರ್ಧನೆ ನೋಟ್ ಪುಸ್ತಕ ವಿತರಿಸಲಾಯಿತು.
ಮುಖ್ಯಶಿಕ್ಷಕ ಶ್ರೀರಾಮ್, ಶಿಕ್ಷಕರಾದ ವೆಂಕಟರಮಣಪ್ಪ, ರವಿಕುಮಾರ್, ಕಿರಣ್, ಷೇಕ್ ಆಸೀುಲ್ಲಾ, ದೇವರಾಜ್, ಸೈಯದ್ ಖಲೀಲ್, ಆಂಜಿನಪ್ಪ, ಮಾಧುರ್ಯ, ಶಾಲಿನಿ, ಅಂಜುಮ್ ಕವಲ್ನಾಜ್, ಆಶಾ ಇದ್ದರು.