ಭೋಪಾಲ್: ಕೇಂದ್ರ ಸರ್ಕಾರದ ಚೀತಾ ಪ್ರಾಜೆಕ್ಟ್ ಅಡಿಯಲ್ಲಿ ನಮೀಬಿಯಾದಿಂದ ಭಾರತಕ್ಕೆ ಕರೆತಂದ ಚೀತಾಗಳಲ್ಲಿ ಆಶಾ ಹೆಸರಿನ ಚೀತಾ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇಂದು ಮೂರು ಮರಿಗಳಿಗೆ ಜನ್ಮ ನೀಡಿದೆ.
ಈ ಸುದ್ದಿಯನ್ನು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ತಿಳಿಸಿದ್ದು, ಮೂರು ಮರಿಗಳ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
ಕುನೋ ರಾಷ್ಟ್ರೀಯ ಉದ್ಯಾನವನವು ಮೂವರು ಹೊಸ ಸದಸ್ಯರನ್ನು ಸ್ವಾಗತಿಸಿರುವ ಸುದ್ದಿಯನ್ನು ಹಂಚಿಕೊಳ್ಳಲು ನನಗೆ ಥ್ರಿಲ್ ಆಗಿದೆ. ಆಶಾ ಹೆಸರಿನ ನಮೀಬಿಯಾ ಚೀತಾಗೆ ಮೂರು ಮರಿಗಳು ಜನಿಸಿವೆ ಎಂದು ಸಚಿವ ಭೂಪೇಂದ್ರ ಯಾದವ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಚೀತಾ ಪ್ರಾಜೆಕ್ಟ್ನಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳಿಗೆ ಮತ್ತು ತಜ್ಞರಿಗೆ ಅಭಿನಂದನೆಗಳನ್ನು ಸಹ ಸಲ್ಲಿಸಿದ್ದಾರೆ. ಅಲ್ಲದೆ, ಪರಿಸರ ಸಮತೋಲನವನ್ನು ಮರುಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದ ಚೀತಾ ಯೋಜನೆಗೆ ಅಬ್ಬರದ ಯಶಸ್ಸು ಸಿಕ್ಕಿದೆ ಎಂದು ಭೂಪೇಂದ್ರ ಯಾದವ್ ಹೊಗಳಿದ್ದಾರೆ.
Purrs in the wild!
Thrilled to share that Kuno National Park has welcomed three new members. The cubs have been born to Namibian Cheetah Aasha.
This is a roaring success for Project Cheetah, envisioned by PM Shri @narendramodi ji to restore ecological balance.
My big congrats… pic.twitter.com/c1fXvVJN4C
— Bhupender Yadav (@byadavbjp) January 3, 2024
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮತ್ತೊಂದು ಚೀತಾ ಜ್ವಾಲಾ (ಈ ಮುಂಚೆ ಸಿಯಾಯಾ) ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ನಾಲ್ಕರಲ್ಲಿ ಒಂದು ಮರಿ ಮಾತ್ರ ಬದುಕುಳಿದಿತ್ತು. 1952ರಲ್ಲಿ ದೇಶದಲ್ಲಿ ದೊಡ್ಡ ಬೆಕ್ಕುಗಳು ನಾಶವಾದ ಏಳು ದಶಕಗಳ ಬಳಿಕ ಭಾರತದಲ್ಲಿ ಜನಿಸಿದ ಮೊದಲ ಚೀತಾ ಮರಿಗಳು ಇವಾಗಿವೆ.
ಪ್ರಧಾನಿ ಹುಟ್ಟುಹಬ್ಬದಂದು ಕರೆತರಲಾಯಿತು
2022ರ ಸೆ.17ರಂದು ನಮೀಬಿಯಾ ದೇಶದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಯಿತು. 8ರಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು. ನಮೀಬಿಯಾ ರಾಜಧಾನಿ ವಿಂಡ್ಹೋಕ್ನಿಂದ ವಿಶೇಷವಾಗಿ ಡಿಸೈನ್ ಮಾಡಲಾದ ಹುಲಿ ಮುಖದ ಬಿ-747 ಜಂಬೋ ಜೆಟ್ನಿಂದ ಚೀತಾಗಳನ್ನು ಕರೆತರಲಾಯಿತು. ಅವುಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಜನ್ಮದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾವನಕ್ಕೆ ಬಿಟ್ಟರು.
ಇಷ್ಟೇ ಅಲ್ಲದೆ, 2023ರ ಫೆಬ್ರವರಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ಮತ್ತೆ 12 ಚೀತಾಗಳನ್ನು ಕರೆತರಲಾಯಿತು. 70 ವರ್ಷಗಳ ಹಿಂದೆಯೇ ಅಳಿದು ಹೋಗಿದ್ದ ಚೀತಾ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಭಾರತಕ್ಕೆ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ಪ್ರಾಜೆಕ್ಟ್ ಚೀತಾ ಹೆಸರಿನಲ್ಲಿ ಭಾರತವು ನಮೀಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. (ಏಜೆನ್ಸೀಸ್)
ಲೋಕೇಶ್ ಮೆಂಟಲ್ ಕಂಡೀಷನ್ ಟೆಸ್ಟ್ ಮಾಡಿ! ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಕೊಟ್ಟ ಕಾರಣವಿದು…
ತೆಂಗಿನಕಾಯಿ ಹಣ್ಣೋ ಅಥವಾ ತರಕಾರಿಯೋ? ಇಲ್ಲಿದೆ ಉತ್ತರದ ಜತೆಗೆ ವಿವರಣೆ…