ಕೂಡ್ಲಿಗಿ: ಪಟ್ಟಣ ಸೇರಿ ತಾಲೂಕಿನಲ್ಲಿ ಶುಕ್ರವಾರ ನಾಗ ಚೌತಿ ಆಚರಿಸಿದ ಜನರು ದೇಶದಿಂದ ಕರೊನಾ ತೊಗಲಿ ಎಂದು ಪ್ರಾರ್ಥಿಸಿದರು. ಮುಂಜಾನೆ ಮನೆ ಅಂಗಳ ಸಾರಿಸಿದ ಮಹಿಳೆಯರು ನಾಗಪ್ಪ ಚಿತ್ರ ಬಿಡಿಸಿ ಬಣ್ಣ ತುಂಬಿದರು. ಬಗೆ, ಬಗೆಯ ಹೂವುಗಳಿಂದ ಅಲಂಕರಿಸಿದರು. ಮಕ್ಕಳು ಹೊಸಬಟ್ಟೆ ಧರಿಸಿ ಖುಷಿಪಟ್ಟರು. ಕುಟುಂಬ ಸದಸ್ಯರು ನಾಗರಕಟ್ಟೆಗಳಿಗೆ ತೆರಳಿ ಮಾಸ್ಕ, ಪರಸ್ಪರ ಅಂತರ ಕಾಯ್ದುಕೊಂಡು ನಾಗಪ್ಪಗೆ ಗೆಜ್ಜೆಹಾರ, ವಿವಿಧ ಪುಷ್ಪಗಳು ಅರ್ಪಿಸಿ ಹಾಲೆರೆದರು.
ತಂಬಿಟ್ಟು , ಹಸಿಹಿಟ್ಟು ಚಿಗಳೆಗಳನ್ನು ಎಡೆಯಿಟ್ಟರು. ಪೂಜೆ ಬಳಿಕ ತರಹವೇರಿ ಉಂಡೆಗಳ ಜತೆ ಹಬ್ಬದ ಊಟ ಸವಿದರು. ಕರೊನಾ ಲಾಕ್ಡೌನ್ ವೇಳೆ ದೂರದ ಊರುಗಳಿಂದ ಸ್ವಗ್ರಾಮಕ್ಕೆ ಬಂದವರು ಕುಟುಂಬ ಸದಸ್ಯರೊಂದಿಗೆ ಹಬ್ಬ ಆಚರಿಸಿದ್ದು ವಿಶೇಷವಾಗಿತ್ತು. ಮಕ್ಕಳು ಜೋಕಾಲಿ ಜೀಕುವ ಮೂಲಕ ಸಂಭ್ರಮಿಸಿದರು. ದೇವಸ್ಥಾನಗಳಲ್ಲಿ ಸಾಂಪ್ರದಾಯಿಕವಾಗಿ ಪೂಜೆಗಳು ನಡೆದವು.