ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಅದು ಜಂಬೂ ಸವಾರಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಚಾಮುಂಡೇಶ್ವರಿಯ ವಿಗ್ರಹವುಳ್ಳ ಚಿನ್ನದ ಅಂಬಾರಿಯನ್ನು ಹೊತ್ತು ಗಜಪಡೆ ಗಾಂಭೀರ್ಯದಿಂದ ಸಾಗುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ಭಕ್ತಿಭಾವದ ಸನ್ನಿವೇಶಕ್ಕೆ ಸಾಕ್ಷಿಯಾಗಲು ಜನಸಾಗರವೇ ಜಂಬು ಸವಾರಿ ಸಾಗುವ ರಸ್ತೆಯ ಉದ್ದಕ್ಕೂ ಕಿಕ್ಕಿರಿದು ನಿಂತಿರುತ್ತಾರೆ. ನೂಕು ನುಗ್ಗಲು ಇಲ್ಲದೆ ಆರಾಮಾಗಿ ಜಂಬೂ ಸವಾರಿ ನೋಡಲು ಬಯಸುವವರು ಅರಮನೆ ಆವರಣವನ್ನು ಆಯ್ದುಕೊಳ್ಳುತ್ತಾರೆ. ಆದರೆ, ಇಲ್ಲಿನ ಪ್ರವೇಶ ಉಚಿತವಾಗಿಲ್ಲ. ಇದಕ್ಕಾಗಿ ಟಿಕೆಟ್ ಖರೀದಿ ಮಾಡಬೇಕು.
ಆದರೆ, ಇಂದು ಆನ್ಲೈನ್ನಲ್ಲಿ ಟಿಕೆಟ್ ಕೌಂಟರ್ ತೆರೆಯುತ್ತಿದ್ದಂತೆ ಕೇವಲ 20 ನಿಮಿಷಕ್ಕೆ ಎಲ್ಲ ಟಿಕೆಟ್ಗಳು ಸೋಲ್ಡೌಟ್ ಆಗಿವೆ. ಟಿಕೆಟ್ಗಾಗಿ ವೆಬ್ಸೈಟ್ ಮೊರೆ ಹೋದವರಿಗೆ ಸೋಲ್ಡೌಟ್ ಆಗಿರುವುದನ್ನು ನೋಡಿ ನಿರಾಸೆಗೊಂಡಿದ್ದಾರೆ.
ಐತಿಹಾಸಿಕ ಜಂಬೂಸವಾರಿ ಮತ್ತು ಪಂಜಿನ ಕವಾಯತು ವೀಕ್ಷಣೆಯ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಟಿಕೆಟ್ಗಳು ಮಿಂಚಿನಂತೆ ಮಾರಾಟವಾಗಿವೆ. ಟಿಕೆಟ್ ಬಿಡುಗಡೆಗೆ ಇಂದು 10 ಗಂಟೆಗೆ ಸಮಯ ನಿಗದಿ ಮಾಡಲಾಗಿತ್ತು. ಆನ್ಲೈನ್ ಮೂಲಕ https://mysoredasara.gov.in ವೆಬ್ಸೈಟ್ನಲ್ಲಿ ಖರೀದಿ ಮಾಡಬಹುದಾಗಿತ್ತು. ಆದರೆ, 10 ಗಂಟೆಗೆ ಬದಲು 11 ಗಂಟೆಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಬಿಡುಗಡೆ ಮಾಡಲಾಯಿತು. ಬಿಡುಗಡೆ ಮಾಡಿದ ಕೇವಲ 20 ನಿಮಿಷಗಳಲ್ಲೇ ಎಲ್ಲ ಟಿಕೆಟ್ ಬುಕ್ಕಿಂಗ್ ಆಗಿವೆ.
ಗೋಲ್ಡ್ ಕಾರ್ಡ್ಗೆ 6000 ರೂಪಾಯಿ, ಜಂಬೂಸವಾರಿಗೆ 2000 ದಿಂದ 3000 ರೂಪಾಯಿ ಹಾಗೂ ಪಂಜಿನ ಕವಾಯತಿಗೆ 500 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿತ್ತು.
ಸಾರ್ವಜನಿಕರ ಆಕ್ರೋಶ
ಈ ಬಾರಿ ಜಂಬೂ ಸವಾರಿ ವೀಕ್ಷಣೆ ಟಿಕೆಟ್ ಬಲು ದುಬಾರಿಯಾದ್ದರಿಂದ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದರು. ಸರಳ ಹಾಗೂ ಸಂಪ್ರದಾಯಕ ದಸರಾ ಹೆಸರಿನಲ್ಲಿ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಹಣ ಹೊಂದಿಸಲು ನಾನಾ ಕಸರತ್ತು ಮಾಡುತ್ತಿದ್ದು, ಅದರಲ್ಲಿ ಜಂಬೂ ಸವಾರಿ ವೀಕ್ಷಣೆ ಟಿಕೆಟ್ ದರ ಏರಿಕೆಯೂ ಒಂದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ಟಿಕೆಟ್ ದರ ದುಬಾರಿಯಾದರೂ ಇಷ್ಟು ಬೇಗ ಟಿಕೆಟ್ಗಳು ಸೋಲ್ಡೌಟ್ ಆಗಿರುವುದಕ್ಕೆ ನಾಗರಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಾಂಸ್ಕೃತಿಕ ಮೈಸೂರಿನಲ್ಲಿ ಈಗಾಗಲೇ ದಸರಾ ಹಬ್ಬ ಕಳೆಗಟ್ಟಿದೆ. ಅರಮನೆ ನಗರಿಯ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಾಂಕರಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಪ್ರವಾಸಿ ತಾಣಗಳು ಕೈಚಾಚಿ ಕರೆಯುತ್ತಿವೆ. ಪ್ರತಿನಿತ್ಯ ಮೈಸೂರಿಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಹಣದ ವಹಿವಾಟುವಿನೊಂದಿಗೆ ಉದ್ಯಮ ವಲಯಕ್ಕೂ ಭಾರೀ ಖುಷಿ ತಂದಿದೆ.
ಮೈಸೂರು ದಸರಾ ಜಂಬೂ ಸವಾರಿ ವೀಕ್ಷಣೆ ಬಲು ದುಬಾರಿ! ಗ್ಯಾರೆಂಟಿ ಯೋಜನೆಗಳ ಎಫೆಕ್ಟ್ ಎಂದ ಸಾರ್ವಜನಿಕರು