ಮೈಸೂರು: ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ತೆಪ್ಪ ಮಗುಚಿ ನವಜೋಡಿ ಮೃತಪಟ್ಟ ದುರಂತ ಘಟನೆ ಇಬ್ಬರ ಕುಟುಂಬಕ್ಕೆ ಆಘಾತ ನೀಡಿದ್ದಲ್ಲದೆ ಜಾಲತಾಣದಲ್ಲಿ ಭಾರಿ ಚರ್ಚೆಯ ಜತೆಗೆ ಪ್ರಸ್ತುತ ಪೀಳಿಗೆ ಅನುಸರಿಸುತ್ತಿರುವ ಮಾರ್ಗದ ಬಗೆಗಿನ ಕಳವಳವನ್ನು ಹುಟ್ಟು ಹಾಕಿದೆ. ಇದೀಗ ಸಾವಿಗೆ ಕಾರಣ ಏನೆಂಬುದು ಬಹಿರಂಗವಾಗಿದ್ದು, ಮತ್ತೊಂದು ಚರ್ಚೆ ಶರುವಾಗಿದೆ.
ನವಜೋಡಿಯ ದುರಂತ ಸಾವಿಗೆ ಹೀಲ್ಡ್ ಚಪ್ಪಲಿ ಹಾಗೂ ಭಾರದ ಡ್ರೆಸ್ ಕಾರಣವೆಂದು ಪ್ರತ್ಯಕ್ಷದರ್ಶಿಗಳು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಫೋಟೋಗ್ರಾಫರ್ ಕೀರ್ತಿ, ನಾವಿಕ ಮೂಗಪ್ಪ ವಿರುದ್ಧವೂ ಪ್ರಕರಣ ದಾಖಲಾಗಿದೆ.
ನವಜೋಡಿಯಾದ ಚಂದ್ರು ಮತ್ತು ಶಶಿಕಲಾ ಪ್ರೀ ವೆಡ್ಡಿಂಗ್ ಫೋಟೋಶೂಟ್ಗಾಗಿ ಮೈಸೂರಿನಿಂದ ಮುಡುಕುತೊರೆಗೆ ಆಗಮಿಸಿದ್ದರು. ನದಿ ನೋಡಿದ ಜೋಡಿ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ನಿರ್ಧಾರ ಮಾಡಿದರು.
ತಮ್ಮ ನಿರ್ಧಾರದಂತೆ ನವಜೋಡಿ ತೆಪ್ಪ ಹತ್ತಿದರು. ಈ ವೇಳೆ ನಿಂತುಕೊಂಡೇ ಇದ್ದ ಶಶಿಕಲಾ, ಕುಳಿತುಕೊಳ್ಳುವಾಗ ಹೀಲ್ಡ್ ಚಪ್ಪಲಿ ಸ್ಲಿಪ್ ಆಗಿದೆ. ಪರಿಣಾಮ ತೆಪ್ಪ ಏಕಾಏಕಿ ಮಗುಚಿದೆ. ಈಜುಬಾರದ ಕಾರಣ ಚಂದ್ರು ಮತ್ತು ಶಶಿಕಲಾ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Web Exclusive |ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಮೈಸೂರು ಮೃಗಾಲಯ : ಚೇತರಿಕೆ ಕಾಣದ ಪ್ರವಾಸೋದ್ಯಮ
ಲೈಫ್ ಜಾಕೆಟ್ ಕಡ್ಡಾಯಗೊಳಿಸಲು ಸೂಚನೆ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಕನಿಷ್ಠ ಮುಂಜಾಗ್ರತೆಯನ್ನೂ ವಹಿಸದೆ ಸಾಹಸಕ್ಕೆ ಕೈಹಾಕಿದ್ದರು. ತೆಪ್ಪ ನಡೆಸುವವ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ. ಈ ಸಂಬಂಧ ನೀರಾವರಿ ಇಲಾಖೆಗೆ ಪತ್ರ ಬರೆಯಲು ಚಿಂತಿಸಿದ್ದೇವೆ. ಲೈಫ್ ಜಾಕೆಟ್ ಕಡ್ಡಾಯಗೊಳಿಸುವ ಸಂಬಂಧ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ.
ತೆಪ್ಪ ಏರುವಾಗ ಹೀಲ್ಡ್ ಚಪ್ಪಲಿ ಬೇಕಿತ್ತಾ?
ಇನ್ನು ತೆಪ್ಪದಲ್ಲಿ ಕೂರುವಾಗ ಸಮತೋಲನ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಆದರೆ, ಹೀಲ್ಡ್ ಚಪ್ಪಲಿ ಹಾಕಿಕೊಂಡು ತೆಪ್ಪ ಏರಿದ್ದು ಎಷ್ಟು ಸರಿ ಎಂಬ ಚರ್ಚೆ ನಡೆಯುತ್ತಿದೆ. ಯಾವ ಸ್ಥಳದಲ್ಲಿ ಯಾವುದು ಸೂಕ್ತವೋ ಅದನ್ನು ಅನುಸರಿಸಿದರೆ ಅನಾಹುತ ಸಂಭವಿಸುತ್ತಿರಲಿಲ್ಲ ಎಂಬುದು ಕೆಲವರ ವಾದ. ತಿಳಿದವರಾದರೂ ಸಲಹೆ ನೀಡಬೇಕಿತ್ತು. ತೆಪ್ಪ ಏರಿದ್ದನ್ನು ನೋಡಿದವರಾದರೂ ಸೂಚನೆ ನೀಡಬೇಕಿತ್ತು. ಹೀಲ್ಡ್ ಚಪ್ಪಲಿ ಹಾಕಿಕೊಂಡು ನೆಲದ ಮೇಲೆ ನಡೆಯುವುದು ಕೆಲವೊಮ್ಮೆ ಕಷ್ಟವಿರುವಾಗ ತೆಪ್ಪದಲ್ಲಿ ಹೇಗೆ ಸಾಧ್ಯ ಎಂಬುದು ಅನೇಕರ ವಾದವಾಗಿದೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ನೀರಿನಲ್ಲಿ ಮುಳುಗಿ ಮೃತನಾದ ಪತಿ; 3 ವರ್ಷದ ಮಗುವಿನೊಂದಿಗೆ ಈಜಿ ದಡ ಸೇರಿದ ಮಹಿಳೆಯ ಆಕ್ರಂದನ
ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ ದುರಂತ; ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ ಜೋಡಿ ದುರ್ಮರಣ