ಚಿತ್ರದುರ್ಗ: ಕೋಟೆನಗರಿಯ ಅಧಿದೇವತೆ ಏಕನಾಥೇಶ್ವರಿ ಅಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಮುಂಜಾನೆ ದೇವಿಯ ಮೂಲ ಹಾಗೂ ಉತ್ಸವ ಮೂರ್ತಿಗೆ ಮಹಾರುದ್ರಾಭಿಷೇಕ ಸೇವೆ ನೆರವೇರಿತು. ನಂತರ ಸಂಪ್ರದಾಯದಂತೆ ಕಂಕಣಧಾರಣೆ, ಮದುವಣಗಿತ್ತಿ, ದೊಡ್ಡ ಭಂಡಾರದ ಪೂಜೆ ಜರುಗಿತು.
ಐತಿಹಾಸಿಕ ಕೋಟೆಯ ಮೇಲುದುರ್ಗದಲ್ಲಿನ ದೇವಿ ದೇಗುಲದಲ್ಲಿ ಶ್ರದ್ಧಾ-ಭಕ್ತಿಯಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವಿಯ ದರ್ಶನ, ಮಹಾಮಂಗಳಾರತಿ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ ನೂರಾರು ಭಕ್ತರು ಉಧೋ ಉಧೋ ಹರ್ಷೋದ್ಗಾರ ಮೊಳಗಿಸಿದರು.
ಮದುವಣಗಿತ್ತಿ ಶಾಸ್ತ್ರದ ಅಂಗವಾಗಿ ಮೂಲ ಹಾಗೂ ಉತ್ಸವ ಮೂರ್ತಿಗೆ ಹೊಂಬಾಳೆ, ಸುಗಂಧರಾಜ, ಗುಲಾಬಿ, ಮಲ್ಲಿಗೆ, ಕನಕಾಂಬರ, ಸೇವಂತಿ, ಪತ್ರೆ ಸೇರಿ ವಿವಿಧ ಪುಷ್ಪಗಳಿಂದ ಅಲಂಕಾರ ಸೇವೆ ನೆರವೇರಿತು. ಆನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ರಾತ್ರಿ 10ಕ್ಕೆ ಸಿಂಹ ವಾಹನರೂಢ ದೇವಿಯ ಉತ್ಸವ ಮೂರ್ತಿಯನ್ನು ಬುರುಜನಹಟ್ಟಿ ಭಕ್ತರು ವಿಶೇಷ ಪುಷ್ಪಾಲಂಕಾರದೊಂದಿಗೆ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿ, ಮೇಲುದುರ್ಗದಿಂದ ಕೆಳಗಿನ ದುರ್ಗಕ್ಕೆ ಕರೆತಂದರು. ಬುರುಜನಹಟ್ಟಿ ಸೇರಿ ಅನೇಕ ಭಕ್ತರ ಮನೆಗಳಲ್ಲಿ ದೇವಿಗೆ ಪೂಜೆ ಸಲ್ಲಿಸಲಾಯಿತು. ನೆರೆದಿದ್ದವರಿಗೆ ಪ್ರಸಾದ ವಿತರಿಸಲಾಯಿತು. ಮತ್ತೆ ದೇವಿಯನ್ನು ತಡರಾತ್ರಿ ಕೋಟೆಯೊಳಗಿನ ದೇಗುಲಕ್ಕೆ ಕರೆತರಲಾಯಿತು.