ಚಿತ್ರದುರ್ಗ: ಉಸಿರಿರುವವರೆಗೂ ಅಬಲೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಲು ಸಿದ್ಧ. ಈ ಮೂಲಕ ಪುನೀತ್ ಅವರ ಕನಸ್ಸನ್ನು ಈಡೇರಿಸುತ್ತೇವೆ ಎಂದು ನಟ ಶಿವರಾಜ್ಕುಮಾರ್ ಭರವಸೆ ನೀಡಿದರು.
ಹೊರವಲಯದ ಭೋವಿ ಗುರುಪೀಠಕ್ಕೆ ಭಾನುವಾರ ಭೇಟಿ ನೀಡಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಿವಿಧ ಮಠಾಧೀಶರ ಆಶೀರ್ವಾದ ಪಡೆದ ನಂತರ ಮಾತನಾಡಿದರು.
ಶಕ್ತಿಧಾಮ ಸೇವೆ ಮಾಡಲು ಪ್ರೇರಣೆ ಹೆಚ್ಚಿಸಿದೆ. ಜನಸೇವೆ ಜನಾರ್ದನ ಸೇವೆಯಾಗಿದ್ದು, ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ರಾಜ್ ಕುಟುಂಬ ಶ್ರಮಿಸಲಿದೆ ಎಂದು ಆಶ್ವಾಸನೆ ನೀಡಿದರು.
ಶಿವಮೊಗ್ಗ ಕ್ಷೇತ್ರದ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೋದ ಕಡೆಯಲೆಲ್ಲ ಬೆಂಬಲ ನೀಡುತ್ತಿದ್ದಾರೆ. ಯಾವ ಕ್ಷೇತ್ರವಾಗಲಿ ಪೈಪೋಟಿ ಸಹಜ. ಗೆಲುವಿಗಾಗಿ ಕೊನೆ ಹಂತದವರೆಗೂ ಹೋರಾಟ ಮಾಡುತ್ತೇವೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಮಾತನಾಡಿ, ನನ್ನ ತಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಜನ ಅದನ್ನು ಇಂದಿಗೂ ಮರೆತಿಲ್ಲ. ಅವರ ಕೊಡುಗೆ ನನಗೆ ವರದಾನವಾಗುವ ವಿಶ್ವಾಸವಿದೆ. ಕ್ಷೇತ್ರದ ಜನ ಮನೆ ಮಗಳಂತೆ ಸ್ವೀಕರಿಸಿದ್ದಾರೆ ಎಂದು ಹೇಳಿದರು.
ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ವಾಗ್ದಾನ ನೀಡಿದಂತೆ ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗದ ರವಿಕುಮಾರ್ ಅವರನ್ನು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು.
ರೇಣುಕಾನಂದ ಶ್ರೀ, ಶಾಂತವೀರ ಶ್ರೀ, ವಾಲ್ಮೀಕಿ ಪ್ರಸನ್ನಾನಂದ ಶ್ರೀ, ಬಸವ ಮಾಚಿದೇವ ಶ್ರೀ, ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀ, ಕೇತೇಶ್ವರ ಶ್ರೀ, ಕುಂಬಾರ ಗುಂಡಯ್ಯ ಶ್ರೀ, ಮಹಾಲಿಂಗ ಶ್ರೀ, ಬಸವ ಪ್ರಸಾದ ಶ್ರೀ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ಪೀರ್, ಮುಖಂಡರಾದ ಎಸ್.ರವಿಕುಮಾರ್, ಎನ್.ಡಿ.ಕುಮಾರ್, ಅನಿಲ್ಕುಮಾರ್ ತಡಕಲ್, ಸಂದೀಪ, ದೇವಿಕುಮಾರ್, ಬಿ.ಜಗದೀಶ್ ಇತರರಿದ್ದರು.