More

    ಪ್ರೇಕ್ಷಕರ ಮಂತ್ರಮುಗ್ಧರನ್ನಾಗಿಸಿದ ಮೈಸೂರು ಮಲ್ಲಿಗೆ

    ಚಿಕ್ಕಮಗಳೂರು: ಬ್ರಾಹ್ಮಣ ಮಹಾಸಭಾ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಬೆಂಗಳೂರಿನ ಕಲಾ ಗಂಗೋತ್ರಿ ರಂಗ ತಂಡದಿಂದ ಭಾನುವಾರ ಏರ್ಪಡಿಸಿದ್ದ ಮೈಸೂರು ಮಲ್ಲಿಗೆ ನಾಟಕ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

    ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಬದುಕಿನ ಮೂರು ಹಂತಗಳನ್ನು, ವೃದ್ಧಾಪ್ಯ ಕಾಲದಲ್ಲಿ, ಜೀವನದಲ್ಲಿ ಅನುಭವಿಸಿದ ನೋವು, ಹತಾಶೆ, ನಿರಾಶೆ, ಕಿತ್ತು ತಿನ್ನುವ ಬಡತನ, ಅವರು ಪಟ್ಟ ಪರಿಶ್ರಮವನ್ನು ಕಲಾವಿದರು ಮನೋಜ್ಞ ಅಭಿನಯದ ಮೂಲಕ ಸಮರ್ಥವಾಗಿ ತೆರೆದಿಟ್ಟರು.
    ಆರಂಭದಲ್ಲಿ ಪ್ರೇಮ ಕವಿಯ ಒಲವಿನ ಕವನಗಳು, ಶೃಂಗಾರ ಗೀತೆಗಳನ್ನು ನೋಡಿ ಆನಂದಿಸಿದರು. ನಂತರ ವೃದ್ಧಾಪ್ಯದಲ್ಲಿ ಅವರು ಅನುಭವಿಸಿದ ಬಡತನ, ಪರಿಶ್ರಮ, ನೋವುಗಳನ್ನು ಕಂಡು ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು.
    ಬಳೆಗಾರ ಚೆನ್ನಯ್ಯನಾಗಿ ಪ್ರದೀಪ್ ನಾಡಿಗ್, ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಪಾತ್ರದಲ್ಲಿ ಸಿದ್ದಾರ್ಥ ಭಟ್ ಮತ್ತು ಕಲಾ ಗಂಗೋತ್ರಿ ಕಿಟ್ಟಿ ಹಾಗೂ ಕವಿಯ ಪತ್ನಿ ಪಾತ್ರದಲ್ಲಿ ಡಾ. ಎಂ.ಎಸ್.ವಿದ್ಯಾ ಪರಕಾಯ ಪ್ರವೇಶ ಮಾಡಿದವರಂತೆ ಅದ್ಭುತ ಅಭಿನಯ ನೀಡಿದರು.
    ಬಳೆಗಾರ ಚೆನ್ನಯ್ಯನ ಪಾತ್ರದೊಂದಿಗೆ ಇಡೀ ನಾಟಕವನ್ನು ಮುನ್ನಡೆಸಿದ ನಿರ್ದೇಶನ, ಬಳೆಗಾರನ ಮಾತಿನಲ್ಲಿ ಮೈಸೂರು ಮಲ್ಲಿಗೆ ಕವಿಯ ಕಾಲದ ಹಾಗೂ ಇಂದಿನ ಬದಲಾವಣೆಗಳು, ಆಧುನಿಕತೆಯ ವೈಪರೀತ್ಯಗಳ ವಿಡಂಬನೆ ಕಲಾಮಂದಿರದಲ್ಲಿ ನಗೆಯ ಬುಗ್ಗೆಗಳನ್ನು ಎಬ್ಬಿಸುವುದರ ಜತೆಗೆ ನೋಡುಗರನ್ನು ಚಿಂತನೆಗೆ ಹಚ್ಚಿತು. ಸಿನಿಮಾ ಮತ್ತು ಕಿರುತೆರೆಯ 30ಕ್ಕೂ ಹೆಚ್ಚು ಕಲಾವಿದರು ಒಲವಿನ ಕವಿಯ ಕಾಲದ ವೈಭವವನ್ನು ರಂಗದ ಮೇಲೆ ತೆರೆದಿಟ್ಟರು.
    ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಜೋಶಿ, ಪದಾಧಿಕಾರಿಗಳಾದ ಸುಮಾ ಪ್ರಸಾದ್, ಗೋಪಾಲಕೃಷ್ಣ, ವಿನೀತ್‌ಕುಮಾರ್, ಎಸ್.ಶಾಂತಕುಮಾರಿ, ಸಾಂಸ್ಕೃತಿಕ ಸಂಘದ ಉಪಾಧ್ಯಕ್ಷ ಆನಂದ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಜ್ವಲ್ ಡಿ. ಪಡುಬಿದ್ರಿ, ಖಜಾಂಚಿ ರಣಜಿತ್ ಸಿಂಗ್, ಶಂಕರನಾರಾಯಣ ಭಟ್, ಬೆಳವಾಡಿ ಮಂಜುನಾಥ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts