ಮೈಸೂರು: ಕರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿಯೂ ಹೆಚ್ಚುತ್ತಿರುವುದು ಇನ್ನಷ್ಟು ಭಯ ಸೃಷ್ಟಿಸಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ಮಾ.22) ರಂದು ದೇಶದೆಲ್ಲೆಡೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಅದನ್ನು ಕಟ್ಟುನಿಟ್ಟಾಗಿ ಆಚರಣೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಇಂದಿನಿಂದಲೇ ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದಿದ್ದಾರೆ.
ಜಿಲ್ಲೆಯ ಮೂರು ಗಡಿ ಚೆಕ್ಪೋಸ್ಟ್ಗಳಲ್ಲಿ ಇಂದಿನಿಂದಲೇ ಥರ್ಮಲ್ ಸ್ಕ್ಯಾನಿಂಗ್ ಪ್ರಾರಂಭ ಮಾಡಲಾಗುವುದು. ಸೋಂಕು ಇಲ್ಲದಿದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೇರಳ-ಮೈಸೂರು ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಕಸಾಯಿ ಖಾನೆ ಮುಚ್ಚಲಾಗುವುದು. ಹಾಗೇ ಬಿಗ್ ಬಜಾರ್, ಶಾಪಿಂಗ್ ಮಾಲ್ಗಳನ್ನೂ ಬಂದ್ ಮಾಡಲೇಬೇಕು. ಕರೊನಾ ನಿಯಂತ್ರಣ ಕ್ರಮ ಕೈಗೊಳ್ಳಲು ಬೇಕಾದ ಅಗತ್ಯ ವೆಚ್ಚಗಳನ್ನು ವಿಪತ್ತು ನಿರ್ವಹಣಾ ನಿಧಿಯಿಂದಲೇ ಪೂರೈಸಲಾಗುವುದು ಎಂದಿದ್ದಾರೆ.
ಪಿಜಿ, ಹಾಸ್ಟೆಲ್ಗಳನ್ನು ಮುಚ್ಚಲು ಒತ್ತಾಯವಿಲ್ಲ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಸಹಕರಿಸಬೇಕು. ಜಿಲ್ಲೆಯಲ್ಲಿರುವ 23 ಆಂಬುಲೆನ್ಸ್ಗಳು 24 ಗಂಟೆಯೂ ಕೆಲಸ ಮಾಡಬೇಕು. ಇನ್ನು 139 ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಸ್ಯಾನಿಟೈಸರ್, ಮಾಸ್ಕ್ಗಳನ್ನು ಪೂರೈಸಲಾಗುವುದು ಎಂದು ತಿಳಿಸಿದರು.
ಮದುವೆ, ಬೀಗರೂಟ ಮತ್ತು ಶುಭ ಕಾರ್ಯಗಳನ್ನು ಮುಂದೂಡಿದರೆ ಒಳ್ಳೆಯದು. ಆರೋಗ್ಯ ಇಲಾಖೆಯ ಇಬ್ಬರು ಸಚಿವರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ನಾಳೆ ಜನತಾ ಕರ್ಫ್ಯೂ ನಿಮಿತ್ತ ದಿನವಿಡೀ ನಾನೂ ಮನೆಯಲ್ಲಿ, ಕುಟುಂಬದ ಜತೆಯೇ ಇರುತ್ತೇನೆ ಎಂದರು.
ಕೇಂದ್ರದಿಂದ ಕರೊನಾ ನಿರ್ವಹಣೆಗೆ ಅನುದಾನ ಬಂದಿಲ್ಲ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರದಿಂದ 184 ಕೋಟಿ ರೂಪಾಯಿ ಅನುದಾನ ಬಂದಿದೆ. ರಾಜ್ಯಸರ್ಕಾರವೂ 200 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನು ಪ್ರಧಾನಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂ ಬಗ್ಗೆ ವಿಶ್ವದೆಲ್ಲೆಡೆಯಿಂದ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ ಎಂದು ಹೇಳಿದರು.
ಡೈಲಾಗ್ ಟೀಸರ್ಗೆ ಪ್ರೇಕ್ಷಕರ ಮೆಚ್ಚುಗೆ: ನಾಲ್ಕು ದಿನಗಳಲ್ಲಿ ಎರಡು ಮಿಲಿಯನ್ ಹಿಟ್ಸ್ ಕಂಡ ‘ಯುವರತ್ನ’