ಲಖನೌ: ಘಟನೆಯೊಂದರಲ್ಲಿ 22 ವರ್ಷದ ಮುಸ್ಲಿಂ ಯುವಕನೋರ್ವ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಕ್ಕೆ ಅನುಮತಿ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿರುವ ಘಟನೆ ಉತ್ತರಪ್ರದೇಶದ ಮರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಈ ಪ್ರಕರಣವು ರಾಜ್ಯಾದ್ಯಂತ ಹೊಸ ಬಿರುಗಾಳಿಯನ್ನು ಎಬ್ಬಿಸಿದ್ದು, ರಾಜಕೀಯ ವಲಯದಲ್ಲಿ ಪರ-ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆಮೀರ್ ಅಲಿ(22) ಎಂಬ ಹೆಸರಿನ ಯುವಕನು ಮತಾಂತರಗೊಳ್ಳುತ್ತಿರುವ ಹಿನ್ನಲೆಯಲ್ಲಿ ತಮ್ಮ ಸಮುದಾಯದವರಿಂದ ದಾಳಿಯ ಭೀತಿ ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ತನಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಮನವಿ ಮಾಡಿದ್ದಾನೆ.
ನಾಟಕವಾಡುತ್ತಿದ್ದಾನೆ
ಇತ್ತ ತನ್ನ ಪತಿ ಮತಾಂತರವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಆಮೀರ್ ಪತ್ನಿ ಗುಲ್ಫಾನ್ಸ(19) ಆತ ಹಿಂದೂ ಯುವತಿಯೊಂದಿಗೆ ಸಂಬಂಧವನ್ನಿಟ್ಟುಕೊಂಡಿದ್ದು, ಆಕೆಯನ್ನು ಮದುವೆಯಾಗಲು ಕಾನೂನನ್ನು ಮುಂದಿಟ್ಟುಕೊಂಡು ಈ ರೀತಿ ನಾಟಕವಾಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.
ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಮೀರ್ ಪತ್ನಿ ಗುಲ್ಫಾನ್ಸ ನನ್ನ ಪತಿಗೆ ಹಿಂದೂ ಧರ್ಮದ ಯುವತಿಯೊಂದಿಗೆ 2014ರಿಂದಲೂ ಸಂಬಂಧ ಹೊಂದಿದ್ದಾನೆ. 2022ರಲ್ಲಿ ನಮ್ಮ ಮದುವೆಯಾಗಿದ್ದು, ನಾಲ್ಕು ತಿಂಗಳ ಹೆಣ್ಣು ಮಗು ಸಹ ಇದೆ. ನಾನು ಆತನನ್ನು ಮದುವೆಯಾದ ಆರು ತಿಂಗಳ ಬಳಿಕ ಅಕ್ರಮ ಸಂಬಂಧ ಹೊಂದಿರುವ ಕುರಿತು ತಿಳಿದು ಆಕ್ಷೇಪಿಸಿದ್ದಕ್ಕೆ ಅವಳಿಂದ ದೂರವಾಗುವುದಾಗಿ ತಿಳಿಸಿದ್ದ.
ಇದನ್ನೂ ಓದಿ: VIDEO| ಲಂಚ ಪಡೆಯುತ್ತಿದ್ದ ಪೊಲೀಸ್ ಅಧಿಕಾರಿ ಸಿಬಿಐ ಬಲೆಗೆ
ನಾನು ನಿಮ್ಮ ಮಗಳಿದ್ದಂತೆ
ತನ್ನ ಪ್ರಿಯಕರ ದೂರ ಆಗುತ್ತಿರುವ ವಿಚಾರ ತಿಳಿದ ಪ್ರೇಯಸಿ ಲವ್ ಜಿಹಾದ್ನಡಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಿಂದೂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದಾಳೆ. ಒಂದು ವೇಳೆ ನನಗೆ ವಿಚ್ಚೇದನ ನೀಡಿ ಅವಳ ಜೊತೆ ಹೋದಲ್ಲಿ ನನ್ನ ಕುಟುಂಬಸ್ಥರು ಆತನ ವಿರುದ್ಧ ತ್ರಿವಳಿ ತಲಾಖ್ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಾರೆ.
ಆಕೆಯನ್ನು ಮದುವೆಯಾಗಲು ಮತಾಂತರದ ಹೆಸರಿನಲ್ಲಿ ಏಕೆ ಈ ರೀತಿ ನಾಟಕವಾಡುತ್ತಿದ್ದಾನೆ ಎಂಬುದು ನನಗೆ ಇದುವರೆಗೂ ಅರ್ಥವಾಗಿಲ್ಲ. ನಾನು ನಿಮ್ಮ ಮಗಳಿದ್ದಂತೆ ಈ ವಿಚಾರದಲ್ಲಿ ನೀವು ಮಧ್ಯಪ್ರವೇಶಿಸಿ ನನ್ನನ್ನು ಉಳಿಸಬೇಕು ಎಂದು ಆಮೀರ್ ಪತ್ನಿ ಗುಲ್ಫಾನ್ಸ ಯುಪಿ ಸಿಎಂ ಯೋಗಿ ಆದಿತ್ಯನಾಥ್ಗೆ ವಿನಂತಿಸಿಕೊಂಡಿದ್ದಾರೆ.
ಭದ್ರತೆ ಹೆಚ್ಚಳ
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೆಂದ್ರ ಕುಮಾರ್ ಸಿಂಗ್ ಕಾನೂನಿನ ಪ್ರಕಾರ ವಯಸ್ಕರು ತಮ್ಮ ಇಷ್ಟದ ಧರ್ಮಕ್ಕೆ ಮತಾಂತರಗೊಳ್ಳುವುದಕ್ಕೆ ಯಾವುದೇ ಅಧಿಕಾರಿಯಿಂದ ಅನುಮತಿ ಪಡೆದುಕೊಳ್ಳುವ ಅವಶ್ಯಕತೆಯಿಲ್ಲ. ಆದರೆ, ಈ ಪ್ರಕರಣದಲ್ಲಿ ಆತನ ಪತ್ನಿ ಆಕ್ಷೇಪ ಸಲ್ಲಿಸಿರುವುದರಿಂದ ಸಮಸ್ಯೆಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದೊಂದು ಸೂಕ್ಷ್ಮ ವಿಚಾರ ಆಗಿರುವುದರಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗು ಪೊಲೀಸ್ ವರಿಷ್ಠಾಧಿಕಾರಿಗೆ ಸಹಾಯ ಮಾಡುವಂತೆ ಕೇಳಲಾಗಿದೆ. ದಾಳಿಯಾಗುವ ಸಂಭವವಿದ್ದು, ಆತನ ಮನೆ ಬಳಿ ಭದ್ರತೆಗಾಗಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೆಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.