ಶ್ರೀಶೈಲಂ: ಶಿವ ಸಂಸ್ಕೃತಿಗೆ ಮಾರು ಹೋಗಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರಿಂದ ಮೊಹಮ್ಮದ್ ಮಸ್ತಾನ್ ಎಂಬ ಮುಸ್ಲಿಂ ಯುವಕ ಲಿಂಗ ದೀಕ್ಷೆ ಪಡೆದು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರುಶನ ಪಡೆದನು.
ಮೂಲತಃ ವಿಜಯವಾಡ ನಿವಾಸಿಯಾದ ಮೊಹಮ್ಮದ್, ಮುಂಬೈಯಲ್ಲಿ ಹರ್ಬಲ್ ಉದ್ಯಮ ನಡೆಸುತ್ತಿರುವ ಯುವಕ. ಮೊದಲಿನಿಂದಲೂ ಶಿವ ಸಂಸ್ಕೃತಿಯ ಬಗ್ಗೆ ವಿಶೇಷ ಶ್ರದ್ಧೆ ಹೊಂದಿದವನಾಗಿದ್ದು, ಹಲವಾರು ಬಾರಿ ಶ್ರೀಶೈಲಕ್ಕೆ ಬಂದು ಹೋಗಿದ್ದಾನೆ. ಆದರೆ ಈ ಹಿಂದೆ ಬಂದಾಗಲೆಲ್ಲ ಶ್ರೀಶೈಲ ಜಗದ್ಗುರುಗಳು ದೇಶಮಧ್ಯದಲ್ಲಿ ಧರ್ಮ ಪ್ರಚಾರದಲ್ಲಿ ನಿರತರಾಗಿದ್ದ ಕಾರಣ ಜಗದ್ಗುರುಗಳ ದರ್ಶನವಾಗಿರಲಿಲ್ಲ. ಶಿವರಾತ್ರಿಯಂದು ಜಗದ್ಗುರುಗಳು ಪೀಠದಲ್ಲಿರುತ್ತಾರೆಂದು ತಿಳಿದು ಶಿವರಾತ್ರಿಯ ಶುಭದಿನದಂದು ಶ್ರೀಶೈಲಕ್ಕೆ ಬಂದು ಜಗದ್ಗುರುಗಳ ದರ್ಶನ ಪಡೆದು ಇಷ್ಟಲಿಂಗವನ್ನು ಪಡೆಯಬೇಕೆಂಬ ತನ್ನ ಮನೋಭಿಲಾಶೆಯನ್ನು ಸನ್ನಿಧಿಯವರಿಗೆ ಅರಿಕೆ ಮಾಡಿಕೊಂಡನು. ಆಗ ದೀಕ್ಷೆಯ ನಂತರ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಲು ಮೊಹಮ್ಮದ್ ಮಾನಸಿಕವಾಗಿ ಸಿದ್ಧನಾಗಿರುವುದನ್ನು ಖಾತ್ರಿ ಪಡಿಸಿಕೊಂಡು ನಂತರ ಜಗದ್ಗುರುಗಳು ಅವನಿಗೆ ಲಿಂಗದೀಕ್ಷೆ ನೀಡಿದರು.
ಶ್ರೀಶೈಲ ಜಗದ್ಗುರುಗಳಿಂದ ಲಿಂಗ ದೀಕ್ಷೆ ಪಡೆದ ಮೊಹಮ್ಮದ್ ಮಸ್ತಾನ್;
— Vijayavani (@VVani4U) March 11, 2021
ಶಿವ ಸಂಸ್ಕೃತಿಗೆ ಮಾರುಹೋದ ಮುಸ್ಲಿಂ ಯುವಕ
ವಿವರಗಳಿಗೆ https://t.co/0xT1xMCCZY ನೋಡಿ pic.twitter.com/D8aJDDlbfk
ಮೊದಲು ಪೂರ್ವಾಶ್ರಮ ನಿರಸನಗೊಳಿಸಲು ಅಗರಬತ್ತಿ ಮೂಲಕ ಜಿಹ್ವಾ ದಹನ, ಅಭಿಷೇಕ ಮಂತ್ರಾದಿಗಳ ಮೂಲಕ ದೇಹಶುದ್ಧಿ ಮೊದಲಾದ ವಿಧಿ-ವಿಧಾನಗಳನ್ನು ನೆರವೇರಿಸಿ ದೇಹವನ್ನು ಶುದ್ಧಗೊಳಿಸಿ ಲಿಂಗವನ್ನು ನೀಡಿ ಮಂತ್ರೋಪದೇಶ ಮಾಡಿದರು.ಈ ಸಂದರ್ಭದಲ್ಲಿ ಅವರಿಗೆ ಇಷ್ಟಲಿಂಗವನ್ನು ದೇಹದ ಮೇಲೆ ಸದಾ ಧರಿಸುವಂತೆ, ಪ್ರತಿನಿತ್ಯ ತಪ್ಪದೇ ಅದರ ಪೂಜೆ ನೆರವೇರಿಸುವಂತೆ , ಪೂಜೆ ಮಾಡುವಾಗ ಕನಿಷ್ಠ ೧೦೮ ಬಾರಿ ಪಂಚಾಕ್ಷರಿ ಮಂತ್ರ ಜಪಿಸುವಂತೆ ಮತ್ತು ಇನ್ನು ಮುಂದೆ ಎಂದೂ ಮಾಂಸಾಹಾರ-ಮದ್ಯ ಸೇವನೆ ಮಾಡದಂತೆ, ದುಶ್ಚಟಗಳಲ್ಲಿ ತೊಡಗದಂತೆ ಪ್ರತಿಜ್ಞಾವಿಧಿ ಭೋದಿಸಿದರು. ಹೀಗೆ ಲಿಂಗದೀಕ್ಷೆ ಪಡೆದ ನಂತರ ಮೊಹಮ್ಮದ್ ವೀರಶೈವ ಲಿಂಗಾಯತ ಧರ್ಮದ ಪಂಚಪೀಠಗಳಲ್ಲೊಂದಾದ ಶ್ರೀಶೈಲ ಜಗದ್ಗುರು ಪಂಡಿತಾರಾಧ್ಯ ಮಹಾಪೀಠದ ಮತ್ತು ಮಲ್ಲಿಕಾರ್ಜುನ ಜೋತಿರ್ಲಿಂಗದ ಮತ್ತು ಭ್ರಮರಾಂಭ ದೇವಿಯ ದರ್ಶನ ಪಡೆದನು.