ಗಂಗಾವತಿ: ಸಂಗೀತ ಕ್ಷೇತ್ರದಲ್ಲಿ ಸಾಧನೆ ಕಠಿಣವಾಗಿದ್ದು, ನಿರಂತರ ಅಭ್ಯಾಸದಿಂದ ಮಾತ್ರ ಸಂಗೀತ ಒಲಿಸಿಕೊಳ್ಳಬಹುದಾಗಿದೆ ಎಂದು ಹಿರಿಯ ಕಲಾವಿದ ಭಾಗ್ಯನಗರದ ರಾಮಚಂದ್ರಪ್ಪ ಉಪ್ಪಾರ ಹೇಳಿದರು.
ನಗರದ ಆನೆಗೊಂದಿ ರಸ್ತೆಯ ಗದಿಗೆಪ್ಪ ಕಾಲನಿ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಸಮುದಾಯ ಭವನದಲ್ಲಿ ಶ್ರೀ ಗುರುಕುಮಾರೇಶ್ವರ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ, ಸಂಗೀತ ನಾಟಕ ಅಕಾಡೆಮಿ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಸ್ವರ ಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.
ದಿನಕ್ಕೆ 15 ರಿಂದ 16 ಗಂಟೆ ಸಂಗೀತಾಭ್ಯಾಸ ಮಾಡಿದವರು ಉನ್ನತ ಸ್ಥಾನದಲ್ಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಸಾಧನೆಗೆ ಒಳ್ಳೆ ಗುರು ಮತ್ತು ನಿರಂತರ ಅಧ್ಯಯನದ ಆಸಕ್ತಿ ಬೇಕು. ಸಂಗೀತ ಕ್ಷೇತ್ರಕ್ಕೆ ಪರಂಪರೆಯ ಇತಿಹಾಸವಿದ್ದು, ಮನಸ್ಸನ್ನು ನಿರಾಳತೆಗೆ ಕೊಂಡೊಯ್ಯುವ ಶಕ್ತಿ ಸಂಗೀತಕ್ಕಿದೆ ಎಂದರು.
ಇದನ್ನೂ ಓದಿ: ಸಂಗೀತ ಕ್ಷೇತ್ರಕ್ಕೆ ಪುಟ್ಟರಾಜರ ಕೊಡುಗೆ ಅಪಾರ
ತಬಲಾ ಕಲಾವಿದ ಮಹ್ಮದ್ ರಿಜ್ವಾನ್ ಮುದ್ದಾಬಳ್ಳಿ ಮಾತನಾಡಿದರು. ನಾಗರಾಜ್ ಶ್ಯಾವಿ (ಭಾವಗೀತೆ), ಪಂಚಾಕ್ಷರ ಕುಮಾರ (ವಚನ ಸಂಗೀತ), ವಿದ್ಯಾನಗರದ ಕೆ.ಗಂಗಮ್ಮ (ದಾಸವಾಣಿ) ಮಾರುತಿ ದೊಡ್ಮನಿ (ಭಕ್ತಿಗೀತೆ) ಮತ್ತು ಕೆ.ವರ್ಷಿತಾ ಮತ್ತು ಕೆ.ವೈಷ್ಣವಿಯರಿಂದ ಭರತ ನಾಟ್ಯ ಪ್ರದರ್ಶನ ಜರುಗಿತು. ಪರಿಸರ ಬಳಗದ ಸಂಚಾಲಕ ಸಂದೇಶ ಹಿರೇಮಠ, ಸಂಗೀತ ಶಿಕ್ಷಕ ಶಿವಕುಮಾರ ಗೆಜ್ಜಿ ಇತರರಿದ್ದರು.