More

    ಜಿಲ್ಲೆಯ ಅಭಿವೃದ್ಧಿಗೆ ಯೋಜನೆ: ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಮಾಹಿತಿ

    ಮಂಡ್ಯ: ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಮತ್ತು ಕ್ಷೇತ್ರಗಳನ್ನು ಗುರುತಿಸಿ ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ‘ಮುನ್ನಡೆ ಮಂಡ್ಯ’ ಎಂಬ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ತಿಳಿಸಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಸಂಘ- ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಮೂಲ ನಿವಾಸಿಗಳು ಬೇರೆಡೆ ವಾಸವಾಗಿದ್ದು, ಅವರಿಗೆ ಮಂಡ್ಯ ಜಿಲ್ಲೆಯ ಮೇಲೆ ಇರುವ ಅಭಿಮಾನ, ಅಭಿವೃದ್ಧಿಯ ದೃಷ್ಟಿಕೋನ ಹಾಗೂ ವಿಶ್ವಾಸವನ್ನು ಪಡೆದುಕೊಂಡು ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಸಮಾಗಮ, ಸಮಾಲೋಚನೆ ಹಾಗೂ ಸಮರ್ಪಣೆಯ ಕೆಲಸವಾಗಬೇಕಿದೆ ಎಂದರು.
    ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಆಗಬೇಕಿರುವ ಸರ್ವಾಂಗೀಣ ಅಭಿವೃದ್ಧಿಗೆ ವಿಷನ್ ಮಂಡ್ಯ ಯೋಜನೆ ರೂಪಿಸಿ ಹಕ್ಕೊತ್ತಾಯ ಮಾಡಲಾಗುವುದು. ಹೊಸ ಆಲೋಚನೆಯೊಂದಿಗೆ ಸರ್ಕಾರಿ ವ್ಯವಸ್ಥೆ ಹಾಗೂ ಖಾಸಗಿ ವಲಯದಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಗೆ ಹೊಸ ಆಯಾಮ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಉದ್ಯೋಗಗಳ ಸೃಷ್ಟಿಯ ಬಗ್ಗೆ ಯೋಜನೆ ರೂಪಿಸಿ ಮಂಡಿಸಲಾಗುವುದು. ಮೈಸೂರು ಮತ್ತು ಬೆಂಗಳೂರು ಮಧ್ಯೆ ಇರುವ ಮಂಡ್ಯ ಜಿಲ್ಲೆಯಲ್ಲಿ ಪೂರಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಸಭೆಯಲ್ಲಿ ಚರ್ಚಿಸಿರುವ ವಿಷಯಗಳ ಬಗ್ಗೆ ವಿಷನ್ ಡಾಕ್ಯೂಮೆಂಟ್ ಸಿದ್ಧಪಡಿಸಿ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಜಿಲ್ಲೆಯ ಅಭಿವೃದ್ಧಿಗೆ ದಿಕ್ಸೂಚಿ ನೀಡಲಾಗುವುದು ಎಂದರು.
    ಜಿಲ್ಲೆ ದೇಶದ ಅವಿಭಾಜ್ಯ ಭಾಗವಾಗಿ ಗುರುತಿಸಿಕೊಳ್ಳುವ ರೀತಿಯ ಎಲ್ಲ ಅವಕಾಶಗಳಿವೆ. ಪ್ರವಾಸೋದ್ಯಮಕ್ಕೆ ಎಲ್ಲ ತಾಲೂಕಲ್ಲೂ ಸೌಲಭ್ಯವಿದೆ. ಮುನ್ನಡೆ ಮಂಡ್ಯ ಎಂಬ ಕಚೇರಿಯನ್ನು ತೆರೆದು, ಕೆಲವೇ ತಿಂಗಳಲ್ಲಿ ಆಗಬಹುದಾದ ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಸಾರ್ವಜನಿಕರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುವುದು. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲಾಗುವುದು. ಮುನ್ನಡೆ ಮಂಡ್ಯ ಕಾರ್ಯಕ್ರಮಕ್ಕೆ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಎಲ್ಲರನ್ನು ತೊಡಗಿಸಿಕೊಳ್ಳಲಾಗುವುದು ಎಂದು ವಿವರಿಸಿದರು.
    ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಮುನ್ನಡೆ ಮಂಡ್ಯಕ್ಕೆ ಸ್ವಯಂ ಸೇವಾ ಸಂಸ್ಥೆ ಹಾಗೂ ಯುವಶಕ್ತಿ ಅತ್ಯಂತ ಮುಖ್ಯ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಗ್ರಾಮ ಪಂಚಾಯತಿಗಳಲ್ಲಿ ಯುವ ಸಂಘಗಳನ್ನು ರಚಿಸಲಾಗಿದೆ. ಇವರೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಉತ್ತಮವಾಗಿ ಯೋಜನೆ ಅನುಷ್ಠಾನವಾಗಬೇಕಿದೆ. ಪ್ರವಾಸೋದ್ಯಮವನ್ನು ಈಗಾಗಲೇ ಕೆಲವು ಕಡೆ ಪ್ರಾರಂಭಿಸಲಾಗುತ್ತಿದೆ. ಮುನ್ನಡೆ ಮಂಡ್ಯ ಯೋಜನೆಯ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಉತ್ತೇಜಿಸಬಹುದು ಎಂದರು.
    ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ನಮ್ಮಲ್ಲಿ ಬಹಳಷ್ಟು ಮಹಿಳಾ ಸಂಘಗಳು ಹಲವು ವಿಧದ ವಸ್ತುಗಳು ಹಾಗೂ ಆಹಾರ ಉತ್ಪಾದಿಸುತ್ತಿದ್ದಾರೆ. ಅವರಿಗೆ ಮಾರುಕಟ್ಟೆ ವ್ಯವಸ್ಥೆಯಾಗಬೇಕು. ಈ ಕುರಿತಂತೆ ವಿಸ್ತಾರವಾದ ವರದಿ ಸಲ್ಲಿಸುತ್ತೇನೆ ಎಂದರು.
    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕೆ.ಆರ್.ಪೇಟೆ, ನಾಗಮಂಗಲ ಭಾಗದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಅವಕಾಶವಿದೆ. ಉತ್ತಮ ನೀರಾವರಿ ವ್ಯವಸ್ಥೆ ಇರುವ ಜಿಲ್ಲೆಯ ಕೆಲವು ಭಾಗಗಳಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಇಂತಹ ವಿಷಯಗಳನ್ನು ಮುನ್ನಡೆ ಮಂಡ್ಯದಲ್ಲಿ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು ಎಂದರು.
    ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಮೈಸೂರಿನ ನೇಗಿಲಯೋಗಿ ಸಂಸ್ಥೆಯ ಅಧ್ಯಕ್ಷ ರವಿಕುಮಾರ್, ಮಂಡ್ಯ ನೇಗಿಲಯೋಗಿ ಸಂಸ್ಥೆಯ ಅಧ್ಯಕ್ಷ ಎ.ಸಿ.ರಮೇಶ್, ವಿಕಸನ ಸಂಸ್ಥೆಯ ಮಹೇಶ್‌ಚಂದ್ರಗುರು, ಸುರೇಂದ್ರ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts