ಸಂಡೂರು: ತೋರಣಗಲ್ ರೈಲ್ವೆ ನಿಲ್ದಾಣದ ಘೋರ್ಪಡೆ ನಗರದ ಎಚ್ಎಲ್ ಕಾಲುವೆ ಬಳಿ ಪುರಸಭೆ ಸದಸ್ಯ ನಾಗರಾಜ ನಾಯ್ಕ (32) ಮೇಲೆ ಶಿವಕುಮಾರ್ ಎಂಬುವರು ಭಾನುವಾರ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕರ ಮನೆ ಬಾಗಿಲಿಗೆ ಪುರಸಭೆ ಸೇವೆ
ನಾಗರಾಜ ಬೆನ್ನು ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿದ್ದು ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳ್ಳಾರಿ ವಿಮ್ಸ್ಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ತೋರಣಗಲ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆಗಿದ್ದೇನು?: ವಾರ್ಡ್ನಲ್ಲಿ ಚರಂಡಿ ವಿಚಾರವಾಗಿ ಪುರಸಭೆ ಸದಸ್ಯ ನಾಗರಾಜ ನಾಯ್ಕ ಹಾಗೂ ಶಿವಕುಮಾರ್ ನಡುವೆ ಜಗಳವಾಗಿತ್ತು. ಸ್ಥಳೀಯ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಇದೇ ವಿಚಾರವಾಗಿ ಭಾನುವಾರ ಮಧ್ಯಾಹ್ನ ಕಾಲುವೆ ಬಳಿ ಇಬ್ಬರಿಗೂ ಜಗಳವಾಗಿದ್ದು, ಶಿವಕುಮಾರ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.