ಶಿರಹಟ್ಟಿ: ಪಟ್ಟಣದ ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ಎರಡು ದಿನಗಳವರೆಗೆ ನಡೆದ ತಾಲೂಕು ಮಟ್ಟದ ಸರ್ಕಾರಿ ನೌಕರರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ರೋಚಕತೆಯಿಂದ ಕೂಡಿದ ಪಂದ್ಯಾವಳಿಯಲ್ಲಿ ತಾಲೂಕು ಪಂಚಾಯಿತಿ ತಂಡವನ್ನು ಮಣಿಸಿದ ಪಟ್ಟಣ ಪಂಚಾಯಿತಿ ತಂಡ ಗೆಲುವಿನ ನಗೆ ಬೀರಿತು. ಶಿರಹಟ್ಟಿ ತಾಲೂಕು ಪತ್ರಿಕಾ ತಂಡ ಸೇರಿದಂತೆ ವಿವಿಧ ಇಲಾಖೆಗಳ 14 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಪೊಲೀಸ್ ಮತ್ತು ಕಂದಾಯ ಇಲಾಖೆ ತಂಡ ಬಲಿಷ್ಠವಾಗಿ ಕಂಡುಬಂದರೂ ಸೆಮಿಫೈನಲ್ ಹಂತದಲ್ಲಿ ಎಡವಿದ ಪರಿಣಾಮ ಪಪಂ ಮತ್ತು ತಾಪಂ ತಂಡಗಳು ಅಂತಿಮ ಸುತ್ತು ಪ್ರವೇಶಿಸಿದವು. ಕೊನೆಗೆ ಪಪಂ ತಂಡ ಗೆಲುವು ಸಾಧಿಸಿ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.
ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದ ಸಿಪಿಐ ವಿಕಾಸ ಲಮಾಣಿ, ‘ಕರೊನಾ ಹಾವಳಿಯಿಂದ ತಲ್ಲಣಗೊಂಡಿದ್ದ ಎಲ್ಲರ ಮನಸ್ಸನ್ನು ಅರಳಿಸಿ ಚೈತನ್ಯ ತುಂಬುವ ಉದ್ದೇಶದಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಎಲ್ಲರೂ ಸೌಹಾರ್ದಯುತವಾಗಿ ಕ್ರೀಡಾ ಮನೋಭಾವ ಪ್ರದರ್ಶಿಸಿರುವುದು ಸ್ವಾಗತಾರ್ಹ’ ಎಂದರು. ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಪಿಎಸ್ಐ ಎಸ್.ಎನ್. ನಾಯಕ, ಬಿಇಒ ಆರ್.ಎಸ್. ಬುರಡಿ, ಪಪಂ. ಅಧ್ಯಕ್ಷ ಪರಮೇಶ ಪರಬ, ಜಿಪಂ. ಮಾಜಿ ಅಧ್ಯಕ್ಷ ವಿ.ವಿ. ಕಪ್ಪತ್ತನವರ, ವೈ.ಎಸ್. ಪಾಟೀಲ, ನಾಗರಾಜ ಲಕ್ಕುಂಡಿ, ಎಂ.ಕೆ. ಲಮಾಣಿ, ತಾಲೂಕು ಯುವಜನ ಸೇವೆ ಕ್ರೀಡಾಧಿಕಾರಿ ಎಂ.ಡಿ. ತಳ್ಳಳ್ಳಿ, ಪಪಂ. ಸದಸ್ಯ ಹೊನ್ನಪ್ಪ ಶಿರಹಟ್ಟಿ, ಫಕೀರೇಶ ರಟ್ಟಿಹಳ್ಳಿ, ಇದ್ದರು.