ಮುದಗಲ್ : ಮೊಹರಂ ಆಚರಣೆಯ ಒಂಬತ್ತನೇ ದಿನವಾದ ಸೋಮವಾರ ಕಿಲ್ಲಾದಲ್ಲಿರುವ ಹಜರತ್ ಹಸನ್ ಆಲಂ ಹಾಗೂ ಮೇಗಳಪೇಟೆಯಲ್ಲಿರುವ ಹಜರತ್ ಹುಸೇನ್ ಆಲಂಗಳಿಗೆ ಸಾವಿರಾರು ಭಕ್ತರು ಹರಕೆ ಸಲ್ಲಿಸಿದರು.
ದುಬೈ, ಮುಂಬೈ, ಹೈದರಾಬಾದ್, ಪುಣೆ ಹಾಗೂ ಬೆಂಗಳೂರು ಹಾಗೂ ಇತರ ಊರುಗಳಿಂದ ಬಂದಿದ್ದ ಹಿಂದು-ಮುಸ್ಲಿಂ ಭಕ್ತರು ಕೆಂಪುಸಕ್ಕರೆ, ಲೋಹದ ಕುದುರೆ, ದಟ್ಟಿ, ಹೂಮಾಲೆ, ಛತ್ರಿ, ವಿವಿಧ ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು. ಕೆಲವರು ಕಂದೂರಿ ಮಾಡಿದರೆ ಇನ್ನೂ ಕೆಲವರು ದೀರ್ಘದಂಡ ನಮಸ್ಕಾರ, ಮಕ್ಕಳ ಜವಳದ ಮೂಲಕ ಹರಕೆ ತೀರಿಸಿದರು.
ಮೊಹರಂ ಅಂಗವಾಗಿ ಲಕ್ಷಾಂತರ ಜನಸಮೂಹ ಸೇರುವ ಪಟ್ಟಣದ ಕಿಲ್ಲಾದ ಹುಸೇನ್ ಆಲಂ ದರ್ಗಾದಲ್ಲಿ ಪೊಲೀಸ್ ಇಲಾಖೆ ಮತ್ತು ದರ್ಗಾ ಕಮಿಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ದರ್ಗಾ, ಕೋಟೆ ಒಳಗಡೆ, ರಸ್ತೆಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಬಂದೋಬಸ್ತ್ ಹಾಕಲಾಗಿತ್ತು. ಬೆಳಗ್ಗೆಯಿಂದ ಆರಂಭವಾಗಿದ್ದ ಜಿಟಿಜಿಟಿ ಮಳೆಯಲ್ಲಿಯೂ ಸಾವಿರಾರು ಭಕ್ತರು ದರ್ಗಾಕ್ಕೆ ಆಗಮಿಸಿ ಹರಕೆ ಸಲ್ಲಿಸಿದರು. ಯುವಕರ ತಂಡದ ಹೆಜ್ಜೆ ಕುಣಿತ ನೋಡುಗರ ಗಮನ ಸೆಳೆಯಿತು.