ನವದೆಹಲಿ: ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಕೋರಿಯೋಗ್ರಾಫರ್ ಧನಶ್ರೀ ವರ್ಮ ದಂಪತಿ ಹನಿಮೂನ್ಗಾಗಿ ಈಗಾಗಲೆ ದುಬೈಗೆ ತೆರಳಿದ್ದಾರೆ. ಈ ನಡುವೆ ಅವರಿಗೆ ಅಲ್ಲಿ ಭರ್ಜರಿ ಔತಣ ಕೂಟವೂ ಲಭಿಸಿದೆ. ಇದನ್ನು ಕೊಟ್ಟವರು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ.
ಧೋನಿ ಮತ್ತು ಸಾಕ್ಷಿ ದಂಪತಿ ಕೂಡ ಸದ್ಯ ದುಬೈ ಪ್ರವಾಸದಲ್ಲಿದೆ. ಇದೇ ವೇಳೆ ನವವಿವಾಹಿತ ಚಾಹಲ್-ಧನಶ್ರೀ ವರ್ಮ ದಂಪತಿಯನ್ನು ಭೇಟಿಯಾಗಿರುವ ಧೋನಿ ದಂಪತಿ, ದುಬೈನಲ್ಲೇ ಭರ್ಜರಿ ಔತಣ ಕೂಟವನ್ನು ನೀಡಿದೆ.
ಇದನ್ನೂ ಓದಿ: ಯುವರಾಜ್ ಸಿಂಗ್ ಕ್ರಿಕೆಟ್ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ
ಧೋನಿ ದಂಪತಿ ಔತಣ ಕೂಟ ನೀಡಿದ ಬಗ್ಗೆ ಚಾಹಲ್ ಇನ್ಸ್ಟಾಗ್ರಾಂನಲ್ಲಿ ಸಂಭ್ರಮ ಹಂಚಿಕೊಂಡಿದ್ದು, ‘ಅಪಾರ ಖುಷಿಯಾಗುತ್ತಿದೆ. ಧನ್ಯತೆಯಲ್ಲಿರುವೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಧೋನಿ ದಂಪತಿ ಜತೆಗೆ ಕ್ಲಿಕ್ಕಿಸಿಕೊಂಡಿರುವ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
ಧನಶ್ರೀ ವರ್ಮ ಅವರೂ ಧೋನಿ ದಂಪತಿಗೆ ಇನ್ಸ್ಟಾಗ್ರಾಂನಲ್ಲಿ ಧನ್ಯವಾದ ತಿಳಿಸಿದ್ದಾರೆ. ನೀವು ನೀಡಿದ ಔತಣವನ್ನು ಇಷ್ಟಪಟ್ಟೆವು. ನಿಮ್ಮ ಆತಿಥ್ಯದಲ್ಲಿ ನಮಗೆ ಮನೆಯಲ್ಲೇ ಇದ್ದ ಅನುಭವವಾಯಿತು ಎಂದೂ ಬರೆದುಕೊಂಡಿದ್ದಾರೆ.
ಯುಎಇಯಲ್ಲೇ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡದ ಪರ ಆಡಿದ್ದ ಚಾಹಲ್, ಬಳಿಕ ಅಲ್ಲಿಂದಲೇ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದರು. ಆಸೀಸ್ನಿಂದ ಮರಳಿದ ಬೆನ್ನಲ್ಲೇ ಡಿಸೆಂಬರ್ 22ರಂದು ಗುರುಗ್ರಾಮದಲ್ಲಿ ಧನಶ್ರೀ ಜತೆಗೆ ಹಸೆಮಣೆ ಏರಿದ್ದರು.
ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ, ಧೋನಿಗೂ ಐಸಿಸಿ ಗೌರವ