ಭೋಪಾಲ್: ಮನೆಯಲ್ಲೇ ಉಳಿಯುವ ಮೂಲಕ ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್ಡೌನ್ ನಿಯಮವನ್ನು ಅನುಸರಿಸಿ ಎಂದು ಸಲಹೆ ನೀಡಿದ ಪೊಲೀಸ್ ಸಿಬ್ಬಂದಿಗೆ ಚಾಕು ಇರಿದಿರುವ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್ನ ಇಟ್ವಾರಾದಲ್ಲಿ ನಡೆದಿದೆ.
ತಲೈಯಾ ಪೊಲೀಸ್ ಠಾಣೆಯ ಸಿಬ್ಬಂದಿ ಮೇಲೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸಿದ್ದಾರೆ. ಓರ್ವ ಸಿಬ್ಬಂದಿ ಕೈಗೆ ಹಾಗೂ ಮತ್ತೊರ್ವ ಸಿಬ್ಬಂದಿಯ ಭುಜಕ್ಕೆ ಗಂಭೀರವಾದ ಗಾಯಗಳಾಗಿವೆ. ಸಿಬ್ಬಂದಿಯನ್ನು ಲಕ್ಷ್ಮಣ್ ಯಾದವ್ ಮತ್ತು ಸರಿಶ್ ಕುಮಾರ್ ಎಂದು ಗುರುತಿಸಲಾಗಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ದುಷ್ಕರ್ಮಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ(ಎನ್ಎಸ್ಎ) ಪ್ರಕರಣ ದಾಖಲಿಸುವಂತೆ ಇಂದು ಬೆಳಗ್ಗೆ ಆದೇಶಿಸಿದ್ದಾರೆ.
ಅರಾಜಕತೆ ಸೃಷ್ಟಿಸುವಲ್ಲಿ ನಿರತರಾಗಿರುವ ಗೂಂಡಾಗಳಿಗೆ ಪಾಠ ಕಲಿಸಲಾಗುವುದು. ಈ ಗೂಂಡಾಗಳು ಎನ್ಎಸ್ಎ ಜತೆ ವ್ಯವಹರಿಸಬೇಕಾಗುತ್ತದೆ ಎಂದು ದುಷ್ಕರ್ಮಿಗಳ ವಿರುದ್ಧ ಚೌಹಾಣ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಘಟನೆ ಹಿನ್ನೆಲೆ ಏನು?
ತಲೈಯಾ ಠಾಣೆಯ ಪೊಲೀಸ್ ಅಧಿಕಾರಿ ಡಿ.ಪಿ. ಸಿಂಗ್ ಪ್ರಕಾರ ಸುಮಾರು 20 ಸ್ಥಳೀಯರು ಇಟ್ವಾರಾ ಮಸೀದಿ ಸಮೀಪ ಸೋಮವಾರ ಸಂಜೆ ಓಡಾಡುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಮನೆಗೆ ಮರಳುವಂತೆ ಹೇಳಿದ್ದಾರೆ. ಗುಂಪಿನಲ್ಲಿದ್ದ ಇಬ್ಬರು ದುಷ್ಕರ್ಮಿಗಳಾದ ಶಾಹೀದ್ ಕಬೂತರ್ ಮತ್ತು ಮಹ್ಸಿನ್ ಕಚೋಡಿ ತಮ್ಮ ಸಹವರ್ತಿಗಳೊಂದಿಗೆ ಚಾಕುವಿನಿಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಆರೋಗಳಿಬ್ಬರು ಈ ಹಿಂದೆಯೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಎನ್ಎಸ್ಐ ಹಾಗೂ ಕೊಲೆ ಯತ್ನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)
ಹಾಟ್ಸ್ಪಾಟ್ ಭಿಲ್ವಾರಾದಲ್ಲಿ ಕರೊನಾ ಮಣಿಸಿದ್ದು ಹೇಗೆ ಗೊತ್ತಾ?: ಇತರ ರಾಜ್ಯಗಳಿಗೂ ಮಾದರಿಯಾದ ಸ್ಥಳೀಯಾಡಳಿತ
ರೋಗಿಗಾಗಿ ಮನಮಿಡಿದು 540ಕಿ.ಮೀ ಪ್ರಯಾಣ ಮಾಡಿದ ವೈದ್ಯ: ಜಾಲತಾಣದಲ್ಲಿ ಭಾರಿ ಶ್ಲಾಘನೆ