ಎನ್.ಆರ್.ಪುರ: ಮಾನವೀಯ ಮೌಲ್ಯಗಳು, ಸಂಸ್ಕೃತಿ ನಮ್ಮ ಜೀವನದ ತಾಯಿ ಬೇರುಗಳಿದ್ದಂತೆ. ಇವುಗಳ ಆಧಾರದ ಮೇಲೆ ನಾವು ವೈಚಾರಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಿಇಒ ಕೆ.ಆರ್.ಪುಷ್ಪಾ ತಿಳಿಸಿದರು.
ಸಿಂಹನಗದ್ದೆ ಬಸ್ತಿಮಠದಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟ್ನಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಮಂಗಳವಾರ ಆಯೋಜಿಸಿದ್ದ ನೈತಿಕ ಶಿಕ್ಷಣ ನೀಡುವ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಶಾಂತಿವನ ಟ್ರಸ್ಟ್ ನೀಡಿದ ಜ್ಞಾನ ಶರಧಿ ಹಾಗೂ ಜ್ಞಾನ ವಾರಿಧಿ ಪುಸ್ತಕಗಳನ್ನು ನಿಮ್ಮ ಮಸ್ತಕದಲ್ಲಿ ತುಂಬಿಕೊಳ್ಳಬೇಕು. ಮಹಾತ್ಮ ಗಾಂಧಿ ಹೇಳಿದಂತೆ ಸಚ್ಚಾರಿತ್ರೃವಂತರಾಗಿ ಬದುಕಬೇಕು. ಮಕ್ಕಳು ಮೊಬೈಲ್ ಅನ್ನು ಅಗತ್ಯವಿದ್ದಷ್ಟು ಮಾತ್ರ ಬಳಸಬೇಕು. ಉತ್ತಮ ಪುಸ್ತಕಗಳನ್ನು ಓದಿ. ಕಳೆದುಹೋದ ದಿನಗಳ ಬಗ್ಗೆ ಚಿಂತೆ ಮಾಡುವುದಕ್ಕಿಂತ ವರ್ತಮಾನದಲ್ಲಿ ಒಳ್ಳೆಯ ಬದುಕು ಸಾಗಿಸೋಣ ಎಂದರು.
ಶಾಂತಿವನ ಟ್ರಸ್ಟ್ ನಿರ್ದೇಶಕ ಶಶಿಕಾಂತ್ ಜೈನ್ ಮಾತನಾಡಿ, ಕಳೆದ 30 ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಕ್ಕಳಿಗೆ ಇಂತಹ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಿದ್ದೇವೆ. 3.75 ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. 16 ಲಕ್ಷ ಪುಸ್ತಕ ವಿತರಿಸಿದ್ದೇವೆ. ಶಾಂತಿವನ ಟ್ರಸ್ಟ್ನ ಕಾರ್ಯಕ್ರಮಗಳಿಂದ ಲಕ್ಷಾಂತರ ಜನರು ದುಶ್ಟಟಗಳಿಂದ ದೂರವಾಗಿದ್ದಾರೆ ಎಂದು ತಿಳಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಮಾತನಾಡಿ, ಇಂದು ಹಣ ಮಾಡುವ ಭರದಲ್ಲಿ ಜನರು ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಟ್ರಸ್ಟ್ ನೈತಿಕ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಭೋಗೇಶಪ್ಪ, ಸಂಘಟನಾ ಕಾರ್ಯದರ್ಶಿ ತಿಮ್ಮೇಶಪ್ಪ, ನಿರ್ದೇಶಕರಾದ ಮಂಜಪ್ಪ, ಆರ್.ನಾಗರಾಜ್, ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆ ಶಿಕ್ಷಕ ಗುಣಪಾಲ್ ಜೈನ್, ಜಿ.ಎನ್.ಸ್ವಾಮಿ, ಶಿಲ್ಪಕುಮಾರಿ, ಪೆನಿನಾ ಇದ್ದರು.