ಹೈದರಾಬಾದ್: ತೆಲಂಗಾಣದ ಕರೀಮ್ನಗರ ಜಿಲ್ಲೆಯ ತಿಮ್ಮಾಪುರ್ ಮಂಡಲದ ಯಡಾಲಪಲ್ಲಿ ಗ್ರಾಮದ ಬಳಿಯಿರುವ ಕಾಕಾತಿಯ ಕಾಲುವೆಗೆ ನಾಲ್ಕು ತಿಂಗಳ ಹಿಂದೆ ಬಿದ್ದಿದ್ದ ಕಾರು ಕಳೆದ ಫೆಬ್ರವರಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖಾ ವರದಿಯನ್ನು ಸಲ್ಲಿಸಿದ್ದಾರೆ.
ಕಾರಿನಲ್ಲಿ ಒಂದೇ ಕುಟುಂಬದ ಮೂವರ ಮೃತದೇಹವು ಪತ್ತೆಯಾಗಿತ್ತು. ಮೃತರನ್ನು ನಾರೆಡ್ಡಿ ಸತ್ಯನಾರಾಯಣ, ಪತ್ನಿ ರಾಧಾ ಮತ್ತು ಮಗಳು ವಿನಯ ಶ್ರೀ ಎಂದು ಗುರುತಿಸಲಾಗಿತ್ತು. ಇದೀಗ ವರದಿ ನೀಡಿರುವ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ನಾ ಮಾಡಿದ್ದು ಸರಿಯೋ? ತಪ್ಪೋ? ಗೊತ್ತಿಲ್ಲ, ಕ್ಷಮಿಸಿ ಎಂದು ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ: ಡೆತ್ನೋಟ್ ಪತ್ತೆ
ಮೃತರು ಜನವರಿ 27ರಂದು ಕರೀಮ್ನಗರದ ಬ್ಯಾಂಕ್ ಕಾಲನಿಯಿಂದ ನಾಪತ್ತೆಯಾಗಿದ್ದರು. ಸತ್ಯನಾರಾಯಣ ಅವರು ರಸಗೊಬ್ಬರ ವ್ಯಾಪಾರಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ರಾಧಾ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರು. ವಿನಯ ಶ್ರೀ ನಿಜಾಮಾಬಾದ್ನಲ್ಲಿ ದಂತ ವಿಜ್ಞಾನ ಅಧ್ಯಯನ ನಡೆಸುತ್ತಿದ್ದರು. ಅಂದಹಾಗೆ ರಾಧಾ ಅವರು ಪೆದ್ದಪಲ್ಲಿ ಶಾಸಕ ಮನೋಹರ್ ರೆಡ್ಡಿ ಸಹೋದರಿ.
ಕಾಲುವೆಯಲ್ಲಿ ಬಿದ್ದಿದ್ದ ಕಾರನ್ನು ಫೆಬ್ರವರಿ 17ರಂದು ಪತ್ತೆಹಚ್ಚಲಾಗಿತ್ತು. ಈ ವೇಳೆ ಮೂವರ ಮೃತದೇಹಗಳನ್ನು ಪೊಲೀಸರು ಪತ್ತೆಹಚ್ಚಿದ್ದರು. ಆ ವೇಳೆ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದವು. ಬೈಕ್ನಲ್ಲಿ ಪ್ರಯಾಣಿಸುವಾಗ ನಿಯಂತ್ರಣ ಕಳೆದುಕೊಂಡು ಬೈಕ್ ಸಮೇತ ಕಾಲುಗೆ ಬಿದ್ದಿದ್ದ ದಂಪತಿಯನ್ನು ರಕ್ಷಿಸುವಾಗ ಕಾರು ಪತ್ತೆಯಾಗಿತ್ತು. ಬೈಕ್ನಲ್ಲಿ ಕಾಲುವೆಗೆ ಬಿದ್ದಿದ್ದವರಲ್ಲಿ ವ್ಯಕ್ತಿಯ ಪ್ರಾಣವನ್ನು ಉಳಿಸಲಾಗಿತ್ತು. ಆದರೆ, ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಳು.
ಕಾರು ಮತ್ತು ಮೃತದೇಹ ಪತ್ತೆಯಾದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಈ ವೇಳೆ ಮಾಧ್ಯಮದಲ್ಲಿ ಅನೇಕ ವದಂತಿಗಳು ಸಹ ಹುಟ್ಟಿಕೊಂಡಿತ್ತು. ಇದೆಲ್ಲದರ ನಡುವೆ ತನಿಖೆ ನಡೆಸಿದ ಪೊಲೀಸರಿಗೆ ಸತ್ಯನಾರಾಯಣ ಬರೆದಿದ್ದರು ಎನ್ನಲಾದ ಡೆತ್ನೋಟ್ ಒಂದು ಗೊಬ್ಬರದಂಗಡಿಯಲ್ಲಿ ಪತ್ತೆಯಾಗಿತ್ತು. ಬಳಿಕ ಡೆತ್ನೋಟ್ ಅನ್ನು ಹ್ಯಾಂಡ್ ರೈಟಿಂಗ್ ಸ್ಯಾಂಪಲ್ನೊಂದಿಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬಳಿಕ ಬಂದ ವರದಿಯ ಪ್ರಕಾರ ಸತ್ಯನಾರಾಯಣ ಅವರೇ ಸಾವಿಗೂ ಬಹು ದಿನಗಳ ಮುಂಚೆ ಬರೆದಿದ್ದರು ಎಂಬು ದೃಢವಾಗಿದೆ. ಇದನ್ನೂ ಓದಿ: ಸುಶಾಂತ್ ವ್ಯಕ್ತಿತ್ವ ಎಂಥದ್ದು ಎನ್ನುವುದಕ್ಕೆ ಲಾರೆನ್ ಗಾಟ್ಲೀಬ್ ನಡುವಿನ ವಾಟ್ಸ್ಆ್ಯಪ್ ಚಾಟ್ ಸಾಕ್ಷಿ
ಡೆತ್ನೋಟ್ ಆಧಾರದ ಮೇಲೆ ಪ್ರಕರಣದ ಅಂತಿಮ ತೀರ್ಮಾನಕ್ಕೆ ಬಂದ ಪೊಲೀಸರು ಕುಟುಂಬವೂ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
ಕೊವಿಡ್-19 ಸೋಂಕಿನಿಂದ ಮೃತಪಟ್ಟ ಶಾಸಕ: ಕಂಬನಿ ಮಿಡಿದ ಸಿಎಂ ಮಮತಾ ಬ್ಯಾನರ್ಜಿ