ಮೊಳಕಾಲ್ಮೂರು; ಯಾರಲ್ಲಿ ಕಲಿಕಾಸಕ್ತಿ, ಶಿಸ್ತು, ಶ್ರದ್ಧೆ, ನಿರಂತರ ಅಧ್ಯಯನ ಅಭ್ಯಾಸ ಇರುತ್ತದೆಯೋ ಅಂತಹ ಮಕ್ಕಳಿಗೆ ಪರೀಕ್ಷಾ ಭಯ ಹತ್ತಿರಕ್ಕೂ ಸುಳಿಯುವುದಿಲ್ಲ ಎಂದು ಸಿವಿಲ್ ನ್ಯಾಯಾಧೀಶೆ ಎಸ್.ನಿರ್ಮಲಾ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿಯಿಂದ ಪಟ್ಟಣದ ಆದರ್ಶ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಭಯ ನಿವಾರಣೆ ಕುರಿತು ಮಾತನಾಡಿದರು.
ಅಪ್ಪ ಅಮ್ಮನ ಆಸ್ತಿ ಅಂತಸ್ತಿಗೆ ಎಂದೂ ಆಸೆ ಪಡಬಾರದು. ಸ್ವಪ್ರಯತ್ನದಿಂದ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಓದುವ ಕಾಲದಲ್ಲಿ ಕಲಿಕೆಯತ್ತ ಮಾತ್ರ ಚಿತ್ತ ಹರಿಸಬೇಕು. ಮೊಬೈಲ್, ಟಿವಿ ಇನ್ನಿತರ ಆಧುನಿಕ ಮಾಧ್ಯಮಗಳಿಂದ ದೂರವಿರಬೇಕು. ಉತ್ತಮರೊಂದಿಗೆ ಗೆಳೆತನ ಮಾಡಬೇಕು. ಶಿಕ್ಷಕರು ಬೋಧಿಸುವ ಪಾಠವನ್ನು ಆಸಕ್ತಿಯಿಂದ ಆಲಿಸಬೇಕು. ನಿರಂತರ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ವಕೀಲೆ ಎಂ.ಎನ್.ವಿಜಯಲಕ್ಷ್ಮಿ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ಆಗಬೇಕು. ತಾಯಿ ಮೊದಲ ಗುರುವಾದರೆ ಎಲ್ಲ ಮಕ್ಕಳು ಉತ್ತಮ ಪ್ರಜೆಗಳಾಗುತ್ತಾರೆ. ಅತ್ಯುನ್ನತ ಸಾಧನೆ ಮಾಡಬಲ್ಲರು ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಸುಚಿತ್ರಾ, ಶಿಕ್ಷಕರಾದ ದೇವರಾಜ್, ಎಸ್.ಕೆ.ವಿಜಯ್, ಎಂ.ರೂಪಾ, ಗುರುಸ್ವಾಮಿ ಹಾಗೂ ವಿದ್ಯಾರ್ಥಿಗಳಿದ್ದರು.