ಕೊಪ್ಪಳ: ಬಿಜೆಪಿಯವರಿಗೆ ಮೋದಿ ಗ್ಯಾರಂಟಿ ಆದರೆ, ಮಾದಿಗರಿಗೆ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾದಿಗ ಸಮುದಾಯ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಬಡವರು, ಸಂವಿಧಾನ, ರೈತರು, ಮಹಿಳೆಯರ ವಿರೋಧಿ ಬಿಜೆಪಿ ಸೋಲಿಸಿ. ಕಾಂಗ್ರೆಸ್ ಗೆಲ್ಲಿಸಿ. ಸಂವಿಧಾನ ರಸುವ ಜವಾಬ್ದಾರಿ ಮಾದಿಗರ ಮೇಲಿದೆ. ದೇಶದಲ್ಲಿ ಎಸ್ಸಿ-ಎಸ್ಟಿ ಕಾಯ್ದೆ ಜಾರಿ ತಂದಿದ್ದು ಕಾಂಗ್ರೆಸ್. ಬಿಜೆಪಿಯವರಿಗೆ ತಾಕತ್ತಿದ್ದರೆ ತಮ್ಮ ಅಧಿಕಾರ ಇರುವೆಡೆ ಕಾಯ್ದೆ ಜಾರಿ ಮಾಡಲಿ. ಗಂಗಾ ಕಲ್ಯಾಣ, ಭೂ ಒಡೆತನ ಸೇರಿ ಅನೇಕ ಯೋಜನೆಗಳಿಗೆ ಬಿಜೆಪಿ ಹಣ ನಿಡಲಿಲ್ಲ. ನಮ್ಮ ಅಭಿವೃದ್ಧಿ ಸಹಿಸದೇ ಅನೇಕ ಯೋಜನೆ ರದ್ದುಗೊಳಿಸಿದರು. ಹೀಗಾಗಿ ನಾವೆಲ್ಲ ಜಾಗೃತರಾಗಬೇಕು. ಕಾಂಗ್ರೆಸ್ ಎಲ್ಲ ಜಾತಿಗೂ ಟಿಕೆಟ್ ನೀಡಿದೆ. ಬಿಜೆಪಿ ಈ ಚುನಾವಣೆಯಲ್ಲಿ ಕುರುಬರಿಗೆ ಒಂದು ಟಿಕೆಟ್ ನೀಡದೇ ಬಲಿಷ್ಠ ಸಮುದಾಯವನ್ನು ತುಳಿವ ಕೆಲಸ ಮಾಡಿದೆ. ಮುಂದೆ ಇತರೆ ಜಾತಿಗೂ ಟಿಕೆಟ್ ನೀಡದೇ ಅನ್ಯಾಯ ಮಾಡಬಹುದು. ಈ ನಿಟ್ಟಿನಲ್ಲಿ ಮತದಾರರು ಎಚ್ಚೆತ್ತುಕೊಳ್ಳಬೇಕು ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಮುಖಂಡರಾದ ಅಮರೇಶ ಕರಡಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಗಾಳೇಪ್ಪ ಪೂಜಾರ್, ಈರಪ್ಪ ಕುಡಗುಂಟಿ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಕೃಷ್ಣಾರೆಡ್ಡಿ ಗಲಬಿ, ಬಸವರಾಜ ಭೋವಿ, ಸಿದ್ದೇಶ ಪೂಜಾರ್, ನಿಂಗಜ್ಜ ಶಹಾಪುರ, ವಿರುಪಣ್ಣ ನವೋದಯ, ಮಲ್ಲಿಕಾರ್ಜುನ ಪೂಜಾರ್ ಇತರರಿದ್ದರು.