ಹೈದರಾಬಾದ್: ಮುಂದಿನ ತಿಂಗಳು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ 45 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಇಂದು (ಅ.27) ಬಿಡುಗಡೆ ಮಾಡಿದೆ. ಗಮನಾರ್ಹ ಸಂಗತಿ ಏನೆಂದರೆ, ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರಿಗೆ ಹೈದರಾಬಾದ್ನ ಜುಬಿಲಿ ಹಿಲ್ಸ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಪಕ್ಷದ ಮಾಜಿ ಸಂಸದ ಮಧು ಗೌಡ್ ಯಾಕ್ಸಿ ಅವರಿಗೆ ಲಾಲ್ ಬಹದೂರ್ ನಗರ, ಪೊನ್ನಮ್ ಪ್ರಭಾಕರ್ಗೆ ಹುಸನಾಬಾದ್, ಕಂಡಿ ಶ್ರೀನಿವಾಸ್ ರೆಡ್ಡಿಗೆ ಆದಿಲಬಾದ್, ತುಮ್ಲ ನಾಗೇಶ್ವರ್ ರಾವ್ಗೆ ಖಮ್ಮಮ್ ಮತ್ತು ಕೆ. ರಾಜ್ ಗೋಪಾಲ್ ರೆಡ್ಡಿಗೆ ಮುನುಗೋಡ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ.
ಎರಡನೇ ಪಟ್ಟಿಯೊಂದಿಗೆ ಪಕ್ಷವು ಒಟ್ಟು 100 ಅಭ್ಯರ್ಥಿಗಳ ಹೆಸರನ್ನು ತೆಲಂಗಾಣ ಚುನಾವಣೆಗೆ ಘೋಷಣೆ ಮಾಡಿದೆ. ರಾಜ್ಯವು ಒಟ್ಟು 119 ಸ್ಥಾನಗಳನ್ನು ಹೊಂದಿದೆ. ಅ.15ರಂದು ಕಾಂಗ್ರೆಸ್ 55 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. ಕುತೂಹಲಕಾರಿ ಸಂಗತಿ ಏನೆಂದರೆ, ರಾಜ್ ಗೋಪಾಲ್ ರೆಡ್ಡಿ ಕಾಂಗ್ರೆಸ್ಗೆ ಮರಳಿದ್ದಾರೆ. ಬಿಜೆಪಿಗೆ ಸೇರಲು ಪಕ್ಷವನ್ನು ತೊರೆದ ಒಂದು ವರ್ಷದ ನಂತರ ಮತ್ತೆ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ನಾಯಕತ್ವವು ತೆಲಂಗಾಣ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಚರ್ಚಿಸಿ ಅಂತಿಮಗೊಳಿಸಿದೆ. ಈ ಸಭೆಯಲ್ಲಿ ಪಕ್ಷದೆ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಮಿತಿ ಸದಸ್ಯರು, ತೆಲಂಗಾಣದ ಪ್ರಮುಖ ನಾಯಕರುಗಳು ಉಪಸ್ಥಿತರಿದ್ದರು.
ಅಂದಹಾಗೆ ನವೆಂಬರ್ 3ರಂದು ನೋಟಿಫಿಕೆಶನ್ ಹೊರಡಿಸುವ ಮೂಲಕ ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)
ಮಧ್ಯಪ್ರದೇಶದಲ್ಲಿ ಕತ್ತೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ: ಕಾರಣ ಕೇಳಿದ್ರೆ ಬೆರಗಾಗ್ತೀರಾ!
ಇನ್ಫೊಸಿಸ್ ನಾರಾಯಣಮೂರ್ತಿ ಅವರ ಆ ಮಾತು ‘ವಾರಕ್ಕೆ 70 ಗಂಟೆಗಳ ಕೆಲಸದ ನಡುವೆ’ ಕಳೆದುಹೋಯ್ತಾ?