More

    ದಾಳಿ ವೇಳೆ ಸಿಕ್ಕಿದ್ದು 1.62 ಕೋಟಿ ರೂ.; ಹೇಗಿತ್ತು ಕಾರ್ಯಾಚರಣೆ? ಲೋಕಾಯುಕ್ತ ಐಜಿ ಹೇಳಿದ್ದೇನು? ಇಲ್ಲಿದೆ ಪೂರ್ಣ ಮಾಹಿತಿ…

    ಬೆಂಗಳೂರು: ಟೆಂಡರ್ ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರಿಂದ 40 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳು ಅವರನ್ನು ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್ ಬಂಧಿತ ಆರೋಪಿ.

    ಕ್ರೆಸೆಂಟ್ ರಸ್ತೆಯಲ್ಲಿರುವ ಖಾಸಗಿ ಕಚೇರಿಯೊಂದರಲ್ಲಿ ಗುರುವಾರ ಸಂಜೆ 6.45 ರ ವೇಳೆಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸಾಕ್ಷಿ ಸಮೇತ ಆರೋಪಿಯನ್ನು ಬಂಧಿಸಿ 40 ಲಕ್ಷ ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಲೋಕಾಯುಕ್ತ ಐಜಿ ಸುಬ್ರಮಣ್ಯರಾವ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಇದನ್ನೂ ಓದಿ: ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ರಾಹುಲ್ ಗಾಂಧಿಗೆ ಮನೆ ನೀಡಿ; ಅರ್ಜಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು!

    ಏನಿದು ಪ್ರಕರಣ?

    ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್(ಕೆಎಸ್‌ಡಿಎಲ್) ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್‌ಗಾಗಿ ಕೆಎಸ್‌ಡಿಎಲ್ ಅಧ್ಯಕ್ಷರ ( ಮಾಡಾಳು ವಿರೂಪಾಕ್ಷಪ್ಪ) ಪರವಾಗಿ ಗುತ್ತಿಗೆದಾರರೊಬ್ಬರಿಗೆ 81ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಬಳಿಕ ೪೦ ಲಕ್ಷ ಪಡೆಯುತ್ತಿದ್ದಾಗ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿ ಪ್ರಶಾಂತ್ ಮಾಡಾಳು ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಬಳಿಕ ಕಚೇರಿ ಪರಿಶೀಲನೆ ವೇಳೆ ಒಟ್ಟು 1.62 ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

    ಕಾರ್ಯಾಚರಣೆ ಹೇಗಿತ್ತು?

    ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್, ಕೆಎಸ್‌ಡಿಎಲ್‌ನ ಕಚ್ಚಾ ವಸ್ತುಗಳ ಪೂರೈಕೆ ಮಾಡಲು ಟೆಂಟರ್ ನೀಡಲು ಗುತ್ತಿಗೆದಾರರೊಬ್ಬರಿಗೆ ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿರುವ ತಮ್ಮ ತಂದೆ ಮಾಡಾಳು ವಿರೂಪಾಕ್ಷಪ್ಪ ಅವರ ಪರವಾಗಿ 81 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು ೪೦ ಲಕ್ಷ ರೂ.ಲಂಚವನ್ನು ನಗದು ರೂಪದಲ್ಲಿ ಪಡೆಯಲು ಮುಂದಾಗಿದ್ದರು. ಲಂಚ ನೀಡಲು ಇಚ್ಛಿಸದ ಗುತ್ತಿಗೆದಾರ ಈ ಸಂಬಂಧ ಲೋಕಾಯುಕ್ತ ಬೆಂಗಳೂರು ನಗರ ಘಟಕದ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತದ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ 40 ಲಕ್ಷ ನಗದು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

    ಇದನ್ನೂ ಓದಿ: ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

    ಐವರ ಬಂಧನ

    ಲೋಕಾಯುಕ್ತ ಟ್ರಾಪ್ ಕಾರ್ಯಾಚರಣೆ ವೇಳೆ ಐವರು ಬಲೆಗೆ ಬಿದ್ದಿದ್ದು, ಸಿಕ್ಕಿರುವ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಶ್ಯಪ್ ಕಂಪೆನಿಯ ಮೂವರೊಂದಿಗೆ 40 ಲಕ್ಷ ರೂ. ತಂದಿದ್ದರು. ಸದ್ಯ ಪ್ರಶಾಂತ್, ಆತನ ಅಕೌಟೆಂಟ್ ಹಾಗೂ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ನಾಳೆ ಐವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

    ಶಾಸಕರ ಮನೆಯ ಮೇಲೆಯೂ ದಾಳಿ!

    ಇತ್ತ ಪುತ್ರ ಪ್ರಶಾಂತ್ ಅವರ ಬಂಧನವಾಗುತ್ತಿದಂತೆ ಅತ್ತ ಡಾಲರ್ಸ್‌ ಕಾಲನಿಯಲ್ಲಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮನೆಯ ಮೇಲೆಯೂ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

    ದಾಳಿಯ ವೇಳೆ ಒಟ್ಟು 1.62 ಕೋಟಿ ರೂ. ಸಿಕ್ಕಿದೆ. ಪ್ರಶಾಂತ್ ಅವರು 40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಟ್ರ್ಯಾಪ್ ಮಾಡಿದ ೪೦ ಲಕ್ಷ ರೂ. ನಗದು ಹಾಗೂ ಕಚೇರಿ ಪರಿಶೀಲನೆ ವೇಳೆ ಒಟ್ಟು 1.62 ಕೋಟಿ ನಗದು ಪತ್ತೆಯಾಗಿದೆ. ಈ ಸಂಬಂಧ ಹಲವು ಸ್ಥಳಗಳ ಮೇಲೆ ಮಾಡಲಾಗುತ್ತಿದೆ. ಕಚೇರಿಯಲ್ಲಿ ಸಿಕ್ಕಿರುವ ಹಣದ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಐಜಿ ಸುಬ್ರಮಣ್ಯರಾವ್ ಹೇಳಿದ್ದಾರೆ.

    ಇದನ್ನೂ ಓದಿ: VIDEO | ಅತ್ತಿಗೆಯೊಂದಿಗೆ ಅಕ್ರಮ ಸಂಬಂಧವಿಲ್ಲ ಎಂಬುದನ್ನು ನಿರೂಪಿಸಲು ‘ಅಗ್ನಿಪರೀಕ್ಷೆ’ ಎದುರಿಸಿದ ತಮ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts