ಶಿವಮೊಗ್ಗ: ರಾಜಕಾರಣಿಗಳು ಆಣೆ-ಪ್ರಮಾಣ ಮಾಡುವುದು ಹೊಸದೇನಲ್ಲ. ಈ ಹಿಂದೆಯೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯಿಂದ ಹಿಡಿದು ಅನೇಕ ರಾಜಕಾರಣಿಗಳು ಸತ್ಯಾಸತ್ಯತೆ ಸಂಬಂಧಿಸಿ ಆಣೆ-ಪ್ರಮಾಣದ ವಿಷಯ ಎತ್ತಿದ್ದರು. ಇದೀಗ ಹಾಲಿ ಹಾಗೂ ಮಾಜಿ ಶಾಸಕರಿಬ್ಬರು ಆಣೆ-ಪ್ರಮಾಣಕ್ಕೆ ಮುಂದಾಗಿದ್ದಾರೆ. ಆ ಪೈಕಿ ಒಬ್ಬರು ಈಗಾಗಲೇ ಆಣೆ ಮಾಡಿದ್ದರೆ, ಇನ್ನೊಬ್ಬರು ಇನ್ನೇನು ಆಣೆ ಮಾಡಲಿದ್ದಾರೆ.
ಇಂಥದ್ದೊಂದು ಪ್ರಕರಣಕ್ಕೆ ಈಗ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿಧಿ ಸಾಕ್ಷಿಯಾಗಿದೆ. ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಈ ಆಣೆ-ಪ್ರಮಾಣದ ಕೇಂದ್ರಬಿಂದುಗಳು.
ಶಾಸಕ ಹರತಾಳು ಹಾಲಪ್ಪ ಮರಳು ಕ್ವಾರಿಯವರು ಹಾಗೂ ಸಾಗಣೆದಾರರಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದರು. ಆದರೆ ಹಾಲಪ್ಪ ಅದನ್ನು ಸುಳ್ಳು ಎಂದು ಆರೋಪವನ್ನು ತಳ್ಳಿಹಾಕಿದ್ದರು. ಅದಾಗ್ಯೂ ಪಟ್ಟುಬಿಡದ ಗೋಪಾಲಕೃಷ್ಣ, ಕಮಿಷನ್ ಪಡೆದಿಲ್ಲ ಎಂದು ಹರತಾಳು ಹಾಲಪ್ಪ ಧರ್ಮಸ್ಥಳದಲ್ಲಿ ಆಣೆ ಮಾಡಲಿ ಎಂದು ಸವಾಲು ಹಾಕಿದ್ದರು.
ಇದನ್ನೂ ಓದಿ: ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡುತ್ತಲಿದೆ ಕನ್ನಡದ ‘ಡೊಳ್ಳು’
ಸವಾಲು ಸ್ವೀಕರಿಸಿದ ಹಾಲಪ್ಪ ಇಂದು ಧರ್ಮಸ್ಥಳಕ್ಕೆ ತೆರಳಿ ತಾನು ಯಾವುದೇ ಕಮಿಷನ್ ಪಡೆದಿಲ್ಲ ಎಂದು ಆಣೆ ಪ್ರಮಾಣ ಮಾಡಿದ್ದಾರೆ. ತಾವು ಮಾಡಿರುವ ಆರೋಪ ನಿಜ ಎಂದು ಬೇಳೂರು ಗೋಪಾಲಕೃಷ್ಣ ಕೂಡ ಪ್ರಮಾಣ ಮಾಡಲಿದ್ದು, ಅದಕ್ಕಾಗಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಒಟ್ಟಿನಲ್ಲಿ ಈ ಕುರಿತ ಮುಂದಿನ ಬೆಳವಣಿಗೆ ಕುತೂಹಲ ಕೆರಳಿಸಿದೆ.
ರಾಜ್ಯದ ಮತ್ತೊಂದು ಶಾಲೆಯಲ್ಲೂ ನಮಾಜ್; ಹಿಜಾಬ್ ಧರಿಸಿ ನಮಾಜ್ ಮಾಡಿದ ವಿದ್ಯಾರ್ಥಿನಿಯರು