ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ಧ ಬಿಜೆಪಿ ಮತ್ತು ಕರಾವಳಿಯ ಹಿಂದು ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿವೆ.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ್ದ ಮಿಥುನ್ ರೈ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ ಏಕವಚನದಲ್ಲಿಯೇ ಅವಹೇಳನಕಾರಿಯಾಗಿ ಮಾತನಾಡಿದ್ದ ರೈ, ಮಂಗಳೂರಿಗೆ ಯೋಗಿ ಬಂದರೆ ತಾನೇ ಅವರ ಮುಖಕ್ಕೆ ಮಸಿ ಬಳಿಯುವೆ, ಕರ್ನಾಟಕಕ್ಕೆ ಕಾಲಿಟ್ಟರೆ ನಮ್ಮ ಕಾರ್ಯಕರ್ತರು ಮಸಿ ಬಳಿಯುತ್ತಾರೆ ಎಂದು ತುಳು ಭಾಷೆಯಲ್ಲಿ ಭಾಷಣ ಮಾಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಮಿಥುನ್ ರೈ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಯೋಗಿ ಆದಿತ್ಯನಾಥ್ ಅವರು ನಾಥ ಪರಂಪರೆಯ ಪರಮೋಚ್ಛ ಗುರು. ಮಂಗಳೂರಿನ ಕದ್ರಿಯಲ್ಲಿರುವ ಜೋಗಿ ಮಠವೂ ಅದರ ಕೇಂದ್ರವಾಗಿದೆ. ಮಿಥುನ್ ರೈ ಹೇಳಿಕೆ ನಾಥ ಸಂಪ್ರದಾಯ ಮತ್ತು ಹಿಂದು ಸಮಾಜಕ್ಕೆ ಮಾಡಿದ ಅಪಮಾನ. ಇದಕ್ಕೆ ಹಿಂದು ಸಮಾಜ ತಕ್ಕ ಪಾಠ ಕಲಿಸಲಿದೆ. ಖಾವಿಗೆ ಅಪಮಾನ ಮಾಡಿದ್ದಕ್ಕೆ ಖಂಡಿತವಾಗಿಯೂ ಬೆಲೆ ತೆತ್ತಲಿದ್ದೀರಿ… ಎಂದು ಬಿಜೆಪಿ ಮತ್ತು ಕರಾವಳಿಯ ಹಿಂದು ಸಂಘಟನೆಯ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಅಲ್ಲದೆ, ಬಂಟ್ವಾಳದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಪರ ಈ ಹಿಂದೆ ಚುನಾವಣಾ ಪ್ರಚಾರಕ್ಕೆ ಯೋಗಿ ಆದಿತ್ಯನಾಥ್ ಅವರು ಬಂಧ ಸಂದರ್ಭದಲ್ಲಿ ಸೇರಿದ್ದ ಜನಸ್ತೋಮದ ವಿಡಿಯೋ ತುಣುಕನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿರುವ ಬಂಟ್ವಾಳ ಬಿಜೆಪಿ, ಮಂಗಳೂರಿನಲ್ಲಿ ಯೋಗಿ ಅವರಿಗೆ ಮಸಿಬಳಿಯುವ ಮುನ್ನ ಮಿಥುನ್ ರೈ ಈ ಫ್ಲಾಶ್ ಬ್ಯಾಕ್ ನೋಡಬೇಕು ಎಂದು ಲೇವಡಿ ಮಾಡಿದೆ.
ನವೆಂಬರ್ ಅಂತ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ? ಇಲ್ಲಿದೆ ಸರ್ಕಾರದ ನಿಲುವು