More

    ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣ ಮೂಡುಬಿದಿರೆ; ಯಾರು ಸ್ಪರ್ಧಿಸಿದರೂ ತೀವ್ರ ಪೈಪೋಟಿ ಖಚಿತ

    | ಭುವನ್ ಪುದುವೆಟ್ಟು ಮಂಗಳೂರು
    ಜೈನ ಕಾಶಿ, ಶಿಕ್ಷಣ ಕಾಶಿ ಎಂದೆಲ್ಲ ಖ್ಯಾತಿವೆತ್ತ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಖಾತೆ ತೆರೆದ ಬಿಜೆಪಿ ಈ ಬಾರಿ ಅದನ್ನು ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದ್ದರೆ, ಮತ್ತೆ ಅದನ್ನು ದಕ್ಕಿಸಿಕೊಳ್ಳುವುದು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಲಾಗದ ಕ್ಷೇತ್ರ ಇದ್ದುದು ಮೂಡುಬಿದಿರೆ ಮಾತ್ರ. ಅದನ್ನೂ 2018ರಲ್ಲಿ ಬಿಜೆಪಿ ಗೆದ್ದಿದೆ. ಉಮಾನಾಥ ಕೋಟ್ಯಾನ್ 2013ರಲ್ಲಿ ಸೋತ ಬಳಿಕ ಎರಡನೇ ಬಾರಿ ಪಡೆದ ಅವಕಾಶ ಕೈ ಹಿಡಿಯಿತು. ಹಿಂದುತ್ವ, ಮೋದಿ ಅಲೆಯ ನೆರವಿನೊಂದಿಗೆ ಬಿಜೆಪಿಯಿಂದ ಉಮಾನಾಥ ಕೋಟ್ಯಾನ್ 29,799 ಮತಗಳ ಭಾರಿ ಅಂತರದಿಂದ ಕಾಂಗ್ರೆಸ್‌ನ ಅಭಯಚಂದ್ರ ಜೈನ್ ಅವರನ್ನು ಸೋಲಿಸಿದ್ದರು. ಸತತ ನಾಲ್ಕು ಬಾರಿ ಗೆದ್ದು ಸಚಿವರೂ ಆಗಿದ್ದ ಅಭಯಚಂದ್ರರಿಗೆ ಈ ಸೋಲಿನೊಂದಿಗೆ ಮರ್ಮಾಘಾತವಾಗಿತ್ತು.

    ಗೆದ್ದು ಬೀಗಿದ ಉಮಾನಾಥ ಕೋಟ್ಯಾನ್ ತಮ್ಮ ಅಧಿಕಾರಯುತ ಶೈಲಿಯ ಆಡಳಿತದಿಂದ ಜನಮೆಚ್ಚುಗೆ ಗಳಿಸಿದ್ದಾರೆ. ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ತಾಲೂಕು ಆಡಳಿತ ಸೌಧ, ಬನ್ನಡ್ಕದಲ್ಲಿ ವಿಶ್ವವಿದ್ಯಾಲಯ ಘಟಕ ಕಾಲೇಜು, ಅಳಿಯೂರಿನಲ್ಲಿ ಪಿಯು ಕಾಲೇಜು ಮಂಜೂರು ಜಾರಿಗೆ ತಂದ ಪ್ರಮುಖ ಯೋಜನೆಗಳು. ಗ್ರಾಮಾಂತರ ಸಹಿತ ಕ್ಷೇತ್ರದ ಬಹುತೇಕ ಎಲ್ಲ ರಸ್ತೆಗಳೂ ಅಭಿವೃದ್ಧಿ ಕಂಡಿವೆ. ಇವು ಕೈಹಿಡಿಯಬಹುದು ಎಂಬುದು ಕೋಟ್ಯಾನ್ ನಿರೀಕ್ಷೆ.

    ಈ ನಡುವೆ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿರುವ ಸುದರ್ಶನ ಮೂಡುಬಿದಿರೆ ಕಳೆದ ಬಾರಿಯಂತೆ ಈ ಸಲವೂ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಅವರ ಓಡಾಟ ಹೆಚ್ಚಾಗಿದ್ದು, ಮೂಲೆ ಮೂಲೆಗಳಿಗೂ ಸುತ್ತಿ ಯುವಕರನ್ನು ಸಂಘಟಿಸುತ್ತಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಕ್ಷೇತ್ರದಿಂದ ಸ್ಪರ್ಧೆಗೆ ತೀವ್ರ ಆಸಕ್ತಿ ಹೊಂದಿರುವವರು ಯಾರೂ ಇದ್ದಂತಿಲ್ಲ. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಗದೀಶ ಅಧಿಕಾರಿ ವಿವಾದಗಳಿಂದಾಗಿ ಹಿಂದೆ ಬಿದ್ದಿದ್ದಾರೆ.

    ಮಿಥುನ್ ರೈಗೆ ಒಲಿಯುವುದೇ?: ಕಳೆದ ಚುನಾವಣೆಗೂ ಮೊದಲೇ ಅಭಯಚಂದ್ರ ಜೈನ್ ಕ್ಷೇತ್ರದಲ್ಲಿ ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದ್ದರು. ಮಿಥುನ್ ರೈ ಉತ್ತರಾಧಿಕಾರಿ ಎಂದೂ ಹೇಳಿದ್ದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ಷೇತ್ರಕ್ಕೆ ಐವನ್ ಡಿಸೋಜ ಪ್ರವೇಶವಾಗಿ ಗಲಾಟೆ ಗೌಜಿಗಳು ಗೊಂದಲಗಳು ನಡೆದಿದ್ದವು. ರಾಜ್ಯ ನಾಯಕರ ಎರಡು ಬಣಗಳ ನಡುವಿನ ಮೇಲಾಟವಾಗಿಯೂ ಚಿತ್ರಣ ಬದಲಾಗಿತ್ತು. ಕೊನೆಗೆ ವರಿಷ್ಠರ ಒತ್ತಡಕ್ಕೆ ಮಣಿದು ಅಭಯಚಂದ್ರ ಜೈನ್ ಸ್ಪರ್ಧಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ಈ ಬಾರಿಯಂತೂ ಮಿಥುನ್ ರೈಯೇ ಅಭ್ಯರ್ಥಿ ಎಂದು ಜೈನ್ ಪಕ್ಷದ ವೇದಿಕೆಗಳಲ್ಲಿ ಹೇಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತವಲಯದಲ್ಲೂ ಇರುವುದರಿಂದ ಮಿಥುನ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಕೊನೆಗೆ ಮತ್ತೆ ಅಭಯಚಂದ್ರ ಜೈನ್ ಸ್ಪರ್ಧಿಸಿದರೂ ಅಚ್ಚರಿ ಇಲ್ಲ ಎನ್ನುತ್ತವೆ ಪಕ್ಷದ ಮೂಲಗಳು.

    ಕ್ಷೇತ್ರದಲ್ಲಿ ಸಿಪಿಎಂ ಸಹಿತ ಇತರ ಪಕ್ಷಗಳ ಅಸ್ತಿತ್ವ ಇಲ್ಲ. ಪ್ರಭಾವ ಬೀರುವಷ್ಟು ಮತ ಗಳಿಸುವ ಪಕ್ಷೇತರರೂ ಇಲ್ಲ. ಹಾಗಾಗಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಬಿಜೆಪಿ-ಕಾಂಗ್ರೆಸ್ ನಡುವಿನ ನೇರ ಹಣಾಹಣಿಯ ವೇದಿಕೆ.

    ಬಿಲ್ಲವ-ಮಹಿಳಾ ಕೋಟಾ ಲೆಕ್ಕಾಚಾರ: ಕಾಂಗ್ರೆಸ್‌ನಿಂದ ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಕೂಡ ಅರ್ಜಿ ಹಾಕಿದ್ದಾರೆ. ಇಬ್ಬರೂ ಬಿಲ್ಲವ ಸಮುದಾಯದವರು. ಕಾಂಗ್ರೆಸ್‌ನಿಂದ ಮೂವರು ಬಿಲ್ಲವ ಅಭ್ಯರ್ಥಿಗಳಿಗೆ ದ.ಕ. ಜಿಲ್ಲೆಯಿಂದ ಟಿಕೆಟ್ ನೀಡಬೇಕೆಂಬ ಬೇಡಿಕೆ ಇದ್ದು, ಕನಿಷ್ಠ ಇಬ್ಬರಿಗಾದರೂ ಸಿಗುವುದು ಖಚಿತ. ಒಬ್ಬರಿಗೆ ಬೆಳ್ತಂಗಡಿಯಲ್ಲಿ ಹಾಗೂ ಇನ್ನೊಬ್ಬರಿಗೆ ಮೂಡುಬಿದಿರೆಯಲ್ಲಿ ನಿರೀಕ್ಷಿಸಲಾಗಿದೆ. ಈ ಬಾರಿ ಶಕುಂತಳಾ ಶೆಟ್ಟಿ ಸ್ಪರ್ಧಿಸುವ ಸಾಧ್ಯತೆ ಕ್ಷೀಣಗೊಂಡಿರುವುದರಿಂದ ಮಹಿಳಾ ಕೋಟಾದಲ್ಲಿ ಅವಕಾಶ ಸಿಗಬಹುದು ಎಂಬುದು ಪ್ರತಿಭಾ ಕುಳಾಯಿ ಲೆಕ್ಕಾಚಾರ.

    ಅಮರನಾಥ ಶೆಟ್ಟಿ ಇಲ್ಲದ ಚುನಾವಣೆ: ಕ್ಷೇತ್ರದಲ್ಲಿ ಜನತಾ ಪಾರ್ಟಿಯಿಂದ ಎರಡು ಬಾರಿ, ಜನತಾ ದಳದಿಂದ ಒಮ್ಮೆ ಶಾಸಕರಾಗಿ, ಸಚಿವರೂ ಆದವರು ಕೆ.ಅಮರನಾಥ ಶೆಟ್ಟಿ. 1994ರಲ್ಲಿ ಅವರು ಗೆದ್ದ ಬಳಿಕ ಜನತಾ ಪರಿವಾರಕ್ಕೆ ಕ್ಷೇತ್ರದಲ್ಲಿ ಅಧಿಕಾರ ದೊರೆತಿಲ್ಲ. ಆದರೆ ಎದುರಾಳಿಗಳ ಸೋಲು-ಗೆಲುವನ್ನು ನಿರ್ಣಾಯಕವಾಗಿಸುವಷ್ಟು ಸಾಮರ್ಥ್ಯ ಕ್ಷೇತ್ರದಲ್ಲಿ ಅಮರನಾಥ ಶೆಟ್ಟರು ಪ್ರತಿನಿಧಿಸುವ ಪಕ್ಷಗಳಿಗಿತ್ತು. ಅದಕ್ಕೆ ಅಮರನಾಥ ಶೆಟ್ಟರ ವರ್ಚಸ್ಸೇ ಕಾರಣ. ಜೆಡಿಯು, ನಂತರ ಜೆಡಿಎಸ್ ಸೇರ್ಪಡೆಯಾದರೂ ಅವರ ಪ್ರಭಾವ ಮುಂದುವರಿದೇ ಇತ್ತು. ಸತತ ನಾಲ್ಕು ಬಾರಿ ಅಭಯಚಂದ್ರ ಜೈನ್ ಎದುರು ಸೋಲುಂಡ ಬಳಿಕ ಅನಾರೋಗ್ಯದ ಕಾರಣದಿಂದಾಗಿ 2018ರಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿದರು. ಆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಬೇರೆ ಅಭ್ಯರ್ಥಿ ಸ್ಪರ್ಧಿಸುವುದರೊಂದಿಗೆ 2,000 ಮತಗಳನ್ನೂ ಪಡೆಯಲಾಗದ ಪಕ್ಷವು ಕ್ಷೇತ್ರದಲ್ಲಿ ಪಾತಾಳಕ್ಕೆ ಕುಸಿಯಿತು. 2020ರಲ್ಲಿ ಅಮರನಾಥ ಶೆಟ್ಟರು ನಿಧನರಾಗಿದ್ದಾರೆ. ಈಗ ಹಿರಿಯ ಪುತ್ರಿ ಡಾ.ಅಮರಶ್ರೀ ಸಕ್ರಿಯರಾಗಿದ್ದು, ಜೆಡಿಎಸ್ ಪಕ್ಷದ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರೇ ಈ ಬಾರಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚು.

    ಜಾತಿ ರಾಜಕಾರಣ ಜೋರು: ಮೂಡುಬಿದಿರೆ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,96,832. ಬಿಲ್ಲವ ಸಮುದಾಯ ಅತಿ ಹೆಚ್ಚು (ಸುಮಾರು 65 ಸಾವಿರ ಮತದಾರರು) ಇರುವ ಕ್ಷೇತ್ರಗಳಲ್ಲಿ ಇದೂ ಒಂದು. ಮುಸ್ಲಿಂ ಮತದಾರರ ಸಂಖ್ಯೆ ಆಸುಪಾಸು 40 ಸಾವಿರ. ಸುಮಾರು 30 ಸಾವಿರ ಕ್ರಿಶ್ಚಿಯನ್ ಓಟುಗಳಿವೆ. ಜೈನ ಸಮುದಾಯವರ ಸಂಖ್ಯೆಯೂ ಗಮನಾರ್ಹ. ಹಾಗಾಗಿ ಕಾಂಗ್ರೆಸ್-ಬಿಜೆಪಿಯಿಂದ ಯಾರು ನಿಂತರೂ ಜಾತಿ ವಿಚಾರ ಒಂದಷ್ಟು ಪ್ರಭಾವ ಬಿದ್ದೇ ಬೀರುತ್ತದೆ. ಈ ನಿರ್ಣಾಯಕ ಅಂಶಗಳಿರುವುದರಿಂದ ಪಕ್ಷಗಳು, ನಾಯಕರು ಹೇಗೆ ನಿಭಾಯಿಸುತ್ತಾರೆ ಎಂಬುದೂ ಕುತೂಹಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts