– ಇಲಾಖೆ ಅನುಮತಿ ಇಲ್ಲದೇ ಕೋಟ್ಯಂತರ ರೂ. ಮಣ್ಣು ಸಾಗಾಟ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ.
ಶಿವಾನಂದ ಹಿರೇಮಠ ಗದಗ
ಗದಗ ಅಕ್ಕಪಕ್ಕದಲ್ಲಿ ಅಷ್ಟೇ ನಡೆಯುತ್ತಿದೆ ಎನ್ನಲಾದ ಅಕ್ರಮ ಮಣ್ಣು ಗಣಿಗಾರಿಕೆ ಉಹೆಗೂ ನಿಲುಕದಷ್ಟು ಅಧಿಕವಾಗಿ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆಯುತ್ತಿದೆ. ಜಿಲ್ಲೇಯಲ್ಳೇ ಅತೀದೊಡ್ಡ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ ಇದಾಗಿದ್ದು, ಕೋಟ್ಯಂತರ ರೂ. ಮೌಲ್ಯದ ಮಣ್ಣು ಭೂಗಳ್ಳರ ಪಾಲಾಗಿದೆ. ಜಿಲ್ಲಾ ಕೇಂದ್ರದಿಂದ ಅಕ್ರಮ ಗಣಿಗಾರಿಕೆ ಸ್ಥಳ ದೂರ ಇರುವುದರಿಂದ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಅಕ್ರಮ ಎಗ್ಗಿಲ್ಲದೇ ಸಾಗಿದೆ. ಕೆಂಪು ಸುಂದರಿಗೆ ಮತ್ತಷ್ಟು ಕಂಟಕ ಎದುರಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಇಲ್ಲದೇ ಹಗಲು, ರಾತ್ರಿ ಎನ್ನದೆ ನೂರಾರು ಟಿಪ್ಪರ್ ಮೂಲಕ ಮಣ್ಣು ಸಾಗಿಸಲಾಗುತ್ತಿದೆ.
![ಗಜೇಂದ್ರಗಡದಲ್ಲಿ ಮೀತಿಮಿರಿದ ಅಕ್ರಮ ಮಣ್ಣು ಗಣಿಗಾರಿಕೆ..](https://cdn.vvimgs.com/wp-content/uploads/2024/05/1000140824.jpg)
*ಅಕ್ರಮ ಎಲ್ಲಿ?*
ಜಿಲ್ಲೆಯ ಗಜೇಂದ್ರಗಡ ತಾಲೂಕಿನ, ಹಿರೆಕೊಪ್ಪ ಹಾಗೂ ಬೈರಾಪೂರ ಗುಡ್ಡದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಗಜೇಂದ್ರಗಡ ಪಕ್ಕದಲ್ಲಿ ನಿರ್ಮಾಣ ಆಗುತ್ತಿರುವ ರಾಷ್ಟ್ರೀಯ ಹೆದ್ದಾರಿ 367 ಕ್ಕೆ ಈ ಅಕ್ರಮ ಮಣ್ಣು ಸಾಗಿಸಲಾಗುತ್ತಿದೆ. ರಾಜಕೀಯ ಪ್ರಭಾವಿಗಳ ಬೆಂಬಲಿಗರು ಈ ಕೃತ್ಯ ಎಸಗುತ್ತಿದ್ದಾರೆ ಎಂಬ ಮಾತು ಅವ್ಯಾಹತವಾಗಿ ಕೇಳಿಬರುತ್ತಿವೆ. ಮಣ್ಣು ದಂಧೆಕೊರರಿಂದ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದು, ಅಕ್ರಮಕ್ಕೆ ಕಡಿವಾಣ ಇಲ್ಲದಂತಾಗಿದೆ.
ಗಜೇಂದ್ರಗಡ ತಾಲೂಕಿನ ಬೈರಾಪೂರ ಗುಡ್ಡದ ಬಳಿ ಹಾಗೂ ಹಿರೆಕೊಪ್ಪ ರೈತರ ಜಮೀನು ಹಾಗೂ ಸರ್ಕಾರದ ನಾಲೆಯನ್ನು ಭೂಗಳ್ಳರು ಕೊಳ್ಳೆ ಹೊಡೆಯುತ್ತಿರುವುದು ವಿಜಯವಾಣಿ ರಿಯಾಲಿಟಿ ಚೆಕ್ ನಡೆಸಿದ ಸಂದರ್ಭದಲ್ಲಿ ಕಂಡು ಬಂದಿದೆ. ಬೈರಾಪೂರ ಗ್ರಾಮದ ಗುಡ್ಡದ ಬಳಿಯ ಸ.ನಂ 47/1 ನಲ್ಲಿ ಗಣಿಗಾರಿಕೆ ಅಕ್ರಮ ನಡೆಯುತ್ತಿದೆ. ಹಿರೇಕೊಪ್ಪ ಗ್ರಾಮದ ಸರ್ವೇ ನಂಬರ್ 50/1 ಮತ್ತು 2 ರಲ್ಲಿ ರೈತರಿಗೆ ಹಣದ ಆಮಿಷೆ ಒಡ್ಡಿ ಜಮೀನು ಲೀಜ್ ಪಡೆದು ಭೌಗೋಳಿಕ ನಾಶ ಮಾಡಲಾಗುತ್ತಿದೆ. ಹತ್ತಾರು ಎಕರೆ ಭೂಮಿಯನ್ನು ನೂರಾರು ಅಡಿ ಆಳದ ವರೆಗೆ ಅಗೆದು ಅಕ್ರಮ ಎಸಗಲಾಗಿದೆ.
![ಗಜೇಂದ್ರಗಡದಲ್ಲಿ ಮೀತಿಮಿರಿದ ಅಕ್ರಮ ಮಣ್ಣು ಗಣಿಗಾರಿಕೆ..](https://cdn.vvimgs.com/wp-content/uploads/2024/05/1000140830.jpg)
ಕೋಟ್
ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪರಿಶೀಲನೆ ಮಾಡಲು ಸೂಚಿಸಿದ್ದೇನೆ. ಸರ್ಕಾರದ ನಿಯಮ ಪಾಲನೆ ಮಾಡಲೆಬೇಕು. ಇಲ್ಲವಾದರೆ ತನಿಖೆ ಮಾಡಿಸಿ ಮೂಲಾಜಿಲ್ಲದೆ ಕ್ರಮ ಜರುಗಿಸುತ್ತೆವೆ. ರೈತರಿಗೆ ಸಾರ್ವಜನಿಕರಿಗೆ ತೊಂದರೆ ಆಗುವುದರ ಬಗ್ಗೆ ಮನವಿ ಕೊಟ್ಟರೆ ಆ ಬಗ್ಗೆಯೂ ಕ್ರಮ ಕೈಗೊಳ್ಳುತ್ತೆವೆ.
– ಜಿಲ್ಲಾಧಿಕಾರಿ ವೈಶಾಲಿ. ಗದಗ