ನವದೆಹಲಿ: ತಮ್ಮ ಊರುಗಳಿಗೆ ತೆರಳಲು ಕಾಲ್ನಡಿಗೆಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜತೆ ಮಾತನಾಡಿದರು ಎಂಬ ಕಾರಣಕ್ಕೆ ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನವದೆಹಲಿಯ ಸುಖದೇವ್ ವಿಹಾರ್ ಮೇಲ್ಸೇತುವೆ ಮೇಲೆ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ಇದನ್ನು ಗಮನಿಸಿದ ರಾಹುಲ್ ಗಾಂಧಿ, ಅವರೊಂದಿಗೆ ಮಾತನಾಡಿ ಕ್ಷೇಮ ಸಮಾಚಾರ ವಿಚಾರಿಸಿದ್ದಲ್ಲದೆ, ಅವರ ಅಹವಾಲುಗಳನ್ನು ಕೇಳಿಕೊಂಡರು. ಇದು ಕೇಂದ್ರ ಸರ್ಕಾರವನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಇದನ್ನೂ ಓದಿ: ಶ್ರಮಿಕ್ ರೈಲಿನಲ್ಲಿ ಬಂದ 1241 ವಲಸಿಗರು
ರಾಹುಲ್ ಗಾಂಧಿ ಜತೆ ಅವರೆಲ್ಲರೂ ಮಾತನಾಡಿದ ಬಳಿಕ ಅವರವರ ಊರುಗಳಿಗೆ ಕಳುಹಿಸಿಕೊಡಲು ಕಾಂಗ್ರೆಸ್ ವತಿಯಿಂದ ವಾಹನಗಳನ್ನು ವ್ಯವಸ್ಥೆ ಮಾಡಲಾಯಿತು. ಆ ವಾಹನಗಳು ಸ್ಥಳಕ್ಕೆ ಬಂದಾಗ, ಅವನ್ನು ಹತ್ತದಂತೆ ವಲಸೆ ಕಾರ್ಮಿಕರನ್ನು ಪೊಲೀಸರು ತಡೆದರು ಎಂದು ದೂರಿದ್ದಾರೆ.
ಆದರೆ, ಲಾಕ್ಡೌನ್ ನಿಯಮ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲಿಸುವ ಸಲುವಾಗಿ ಸಾಮೂಹಿಕವಾಗಿ ವಾಹನದಲ್ಲಿ ಪ್ರಯಾಣಿಸದಂತೆ ಇವರೆಲ್ಲರನ್ನೂ ತಡೆದಿರುವುದಾಗಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಕರೊನಾ ಕೇಸ್ಗಳು 559, ಮರಣ ಸಂಖ್ಯೆ 36; 13 ಮಂದಿ ಐಸಿಯುವಿನಲ್ಲಿ