ಕವಿತಾಳ: ಸಮೀಪದ ಅಮೀನಗಡ ಗ್ರಾಮದಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನನ್ನು ಸ್ಥಳೀಯರು ಗ್ರಾಮಸ್ಥರು ಗುರುವಾರ ತಡರಾತ್ರಿ ಹಿಡಿದು ಪೊಲಿಸ್ ಠಾಣೆಗೆ ಒಪ್ಪಿಸಿದ್ದಾರೆ.
ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಮನೆಯೊಂದರ ಕಳ್ಳತನಕ್ಕೆ ಗುರುವಾರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಯತ್ನಿಸಿದ ಕಳ್ಳರನ್ನು ನೋಡಿದ ಗ್ರಾಮದ ಯುವಕನೊಬ್ಬ ಗೌಪ್ಯವಾಗಿ ಗ್ರಾಮದ ಕೆಲವರಿಗೆ ಮೊಬೈಲ್ ಕರೆ ಮಾಡಿ ಎಚ್ಚರಿಸಿದ್ದು ಅಲ್ಲಿಗೆ ಬಂದ ಸಾರ್ವಜನಿಕರು ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಮೂವರಲ್ಲಿ ಒಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ. ಸಾರ್ವಜನಿಕರಿಂದ ಧರ್ಮದೇಟು ತಿಂದ ಕಳ್ಳ ತಾನು ಕಲಬುರಗಿ ಜಿಲ್ಲೆಯ ಆಳಂದ ಮೂಲದವನೆಂದು ಹೇಳಿದ್ದು, ಗ್ರಾಮಸ್ಥರು ಸ್ಥಳೀಯ ಠಾಣೆಗೆ ಆತನನ್ನು ಒಪ್ಪಿಸಿದ್ದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ.