ಮುಂಬೈ: ನಿನ್ನೆ (ಏಪ್ರಿಲ್ 11) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಮುಂಬೈ ಇಂಡಿಯನ್ಸ್ (ಎಂಐ) ನಡುವೆ ನಡೆದ ಐಪಿಎಲ್ ಪಂದ್ಯವು ಒಳ್ಳೆಯ ಮನರಂಜನೆಯನ್ನು ನೀಡಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 197 ರನ್ಗಳ ಬೃಹತ್ ಟಾರ್ಗೆಟ್ ನೀಡಿದರೂ ಮುಂಬೈ ಸುಲಭವಾಗಿ ಗುರಿಮುಟ್ಟಿತು. ಈ ಪಂದ್ಯದ ನಡುವೆ ಮುಂಬೈ ಮಾಜಿ ನಾಯಕ ರೋಹಿತ್ ಶರ್ಮ, ಆರ್ಸಿಬಿ ಸ್ಫೋಟಕ ಆಟಗಾರ ದಿನೇಶ್ ಕಾರ್ತಿಕ್ ಅವರನ್ನು ಕೀಟಲೆ ಮಾಡಿದ ಕ್ಷಣ ಗಮನ ಸೆಳೆಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮುಂಬೈ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ ಅವರಲ್ಲಿ ಹಲವು ಬದಲಾವಣೆಗಳಾಗಿವೆ. ಅಭ್ಯಾಸ ಪಂದ್ಯದಲ್ಲಿ ಮೋಜು ಮಸ್ತಿ ಮಾಡುತ್ತಾ ಸಹ ಆಟಗಾರರನ್ನು ಚುಡಾಯಿಸುತ್ತಾ ಅಭಿಮಾನಿಗಳಿಗೆ ಬೇಕಾದಷ್ಟು ಮನರಂಜನೆ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಚುಡಾಯಿಸಿದ ರೀತಿ ಮಾತ್ರ ನೆಕ್ಸ್ಟ್ ಲೆವೆಲ್ ಎನ್ನುತ್ತಾರೆ ಕ್ರಿಕೆಟ್ ಪ್ರೇಮಿಗಳು. ಈ ಪಂದ್ಯದಲ್ಲಿ ಡಿಕೆ ಬ್ಯಾಟಿಂಗ್ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕೊನೆಯ ಹಂತದಲ್ಲಿ ರನ್ ಮಳೆಯನ್ನೇ ಹರಿಸಿದರು. ಕೇವಲ 23 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ 53 ರನ್ ಗಳಿಸಿ ಅಜೇಯರಾಗಿ ಉಳಿದರು.
ಮುಖ್ಯವಾಗಿ 16ನೇ ಓವರ್ನಲ್ಲಿ ಆಕಾಶ್ ಮಧ್ವಲ್ಗೆ ಸಿಡಿಸಿದ ನಾಲ್ಕು ಬೌಂಡರಿಗಳು ಐಪಿಎಲ್ನ ಹೈಲೈಟ್. ಒಂದೇ ಏರಿಯಾದಲ್ಲಿ 4 ಬೌಂಡರಿಗಳನ್ನು ಬಾರಿಸಿದರು. ಅಲ್ಲದೆ, ಬುಮ್ರಾ ಎಸೆದ 19ನೇ ಓವರ್ನಲ್ಲಿ ಡಿಕೆ ಕೊನೆಯ ಎಸೆತವನ್ನು ಸಿಕ್ಸರ್ಗೆ ಅಟ್ಟಿದರು. ಇದನ್ನು ನೋಡಿದ ರೋಹಿತ್, ಡಿಕೆ ಆಟವನ್ನು ಮೆಚ್ಚಿ, ಅವರ ಬಳಿ ಬಂದು ತಮ್ಮದೇ ಶೈಲಿಯಲ್ಲಿ ಚುಡಾಯಿಸಿದರು. ಹಿಟ್ಮ್ಯಾನ್ ಆಡಿದ ಮಾತುಗಳು ಸ್ಟಂಪ್ ಮೈಕ್ನಲ್ಲಿ ದಾಖಲಾಗಿವೆ. ಹಾಗಾದರೆ ರೋಹಿತ್ ಹೇಳಿದ್ದೇನು ಎಂದು ನೋಡುವುದಾದರೆ, ಶಹಬ್ಬಾಷ್ ಡಿಕೆ, ಟಿ20 ವಿಶ್ವಕಪ್ ಆಡುವುದಕ್ಕಾಗಿಯೇ ಈ ರೀತಿ ಸ್ಫೋಟಕ ಆಟವನ್ನು ಆಡುತ್ತಿದ್ದೀಯಾ? ಎಂದು ನಗುತ್ತಾ ಕೀಟಲೆ ಮಾಡಿದ್ದಾರೆ. ಇದೀಗ ಈ ಮಾತುಗಳು ವೈರಲ್ ಆಗಿವೆ.
Full Video pic.twitter.com/PjOc0J7CRF
— Chetan Gawale (@pseudomudo) April 11, 2024
ದಿನೇಶ್ ಕಾರ್ತಿಕ್ ಕೂಡ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಡುಪ್ಲೆಸಿಸ್ (61), ರಜತ್ ಪಾಟಿದಾರ್ (50), ಡಿಕೆ (53*) ರನ್ ಗಳಿಸಿ ಮಿಂಚಿದರು. ಬಳಿಕ 197 ರನ್ಗಳ ಗುರಿ ಬೆನ್ನತ್ತಿದ ಮುಂಬೈ 15.3 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗಳ ಪೈಕಿ ಇಶಾನ್ ಕಿಶನ್ (69), ರೋಹಿತ್ (38) ಮತ್ತು ಸೂರ್ಯಕುಮಾರ್ (52) ರನ್ಗಳೊಂದಿಗೆ ಮಿಂಚಿದರು. (ಏಜೆನ್ಸೀಸ್)
ಆಂಡ್ರಿಯಾ-ಅನಿರುದ್ಧ್ ಖಾಸಗಿ ಫೋಟೋ ಲೀಕ್! ಕೊನೆಗೂ ಮೌನ ಮುರಿದ ಖ್ಯಾತ ಸಂಗೀತ ನಿರ್ದೇಶಕ
ಮೊಬೈಲ್ ರಿಪೇರಿ ಮಾಡಿಸಿಕೊಡಲಿಲ್ಲ ಅಂತ ಬದುಕನ್ನೇ ಕೊನೆಗೊಳಿಸಿದ ಯುವತಿ!