ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿದು ಸಾಫ್ಟ್ವೇರ್ ಎಂಜಿನಿಯರ್ ತೇಜಸ್ವಿನಿ (28) ಮತ್ತು ಮಗ ವಿಹಾನ್ (2) ಸಾವಿಗೀಡಾಗಿದ ಸುದ್ದಿ ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಇದೀಗ ದುರಂತಕ್ಕೆ ಕಾರಣ ಏನು ಎಂಬುದು ಘಟನೆ ನಡೆದ 10 ದಿನಗಳ ನಂತರ ಸಾಬೀತಾಗಿದೆ.
ಪ್ರಕರಣದ ಬಗ್ಗೆ ಸುದೀರ್ಘ ತನಿಖೆ ನಡೆಸಿರುವ ಭಾರತೀಯ ವಿಜ್ಞಾನ ಸಂಸ್ಥೆ (IISC) ತಜ್ಞರು ಇದೀಗ ವರದಿ ಸಿದ್ಧಪಡಿಸಿದ್ದಾರೆ. ಅದರಲ್ಲಿ ಗುತ್ತಿಗೆದಾರರು ಹಾಗೂ ನಮ್ಮ ಮೆಟ್ರೋ ನಿರ್ಲಕ್ಷ್ಯವೇ ಕಾರಣ ಎಂಬುದು ಸಾಬೀತಾಗಿದೆ. 27 ಪುಟಗಳ ಸುದೀರ್ಘ ವರದಿಯನ್ನು ತಜ್ಞರು ಸಿದ್ಧಪಡಿಸಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ವರದಿಯಲ್ಲಿ ಸಿದ್ಧವಾಗಿರುವ ಅಂಶಗಳು
* ಕಾಮಗಾರಿಗೆ ಬಳಸಿದ ಜಲ್ಲಿ ಗುಣಮಟ್ಟದ್ದಾಗಿದೆ
* ಸಿಮೆಂಟ್ ಗುಣಮಟ್ಟವೂ ಉತ್ತಮವಾಗಿದೆ
* ಕಾಮಗಾರಿ ವಿಚಾರದಲ್ಲಿ ಯಾವುದೇ ಲೊಪದೋಷ ಕಂಡು ಬಂದಿಲ್ಲ
* ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ
* 15 ಮೀಟರ್ ಎತ್ತರ ಕಬ್ಬಿಣ ಜೋಡಿಸಿದ್ದು ಸರಿಯಲ್ಲ
* ಎತ್ತರವಾದ ಕಬ್ಬಿಣ ಇದ್ದಿದ್ದರಿಂದ ಭಾರ ಜಾಸ್ತಿಯಾಗಿ ಕೆಳಗೆ ಬಿದ್ದಿದೆ
* ಸಾಮಾನ್ಯವಾಗಿ ಪಿಲ್ಲರ್ ಎತ್ತರ ಹೋದಾಗ ಅದಕ್ಕೆ ಸಪೋರ್ಟ್ ಕೊಡಬೇಕಿತ್ತು
* ಸಪೋರ್ಟ್ ಇಲ್ಲದಿರುವುದರಿಂದ ಕಬ್ಬಿಣ ಬಾಗಿ ಕೆಳಗೆ ಬಿದ್ದ ದುರ್ಘಟನೆ ಸಂಭವಿಸಿದೆ
ಮೆಟ್ರೋ ಪಿಲ್ಲರ್ ಕುಸಿದು ಇಬ್ಬರು ಮೃತಪಟ್ಟ ಹಿನ್ನೆಲೆ ನಿರ್ಲಕ್ಷ್ಯದ ಆರೋಪದಡಿ BMRCL ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ಮೂಲದ ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ದಂಪತಿ ಇಬ್ಬರೂ ಬೆಂಗಳೂರಿನಲ್ಲಿ 10 ವರ್ಷಗಳಿಂದ ವಾಸವಿದ್ದರು. ಇಬ್ಬರೂ ಸಿವಿಲ್ ಇಂಜಿನಿಯರ್ ಆಗಿದ್ದರು. ಮಕ್ಕಳಿಬ್ಬರನ್ನೂ ಬೇಬಿ ಸಿಟ್ಟಿಂಗ್ಗೆ ಬಿಟ್ಟು, ಪತ್ನಿಯನ್ನ ಕಂಪನಿ ಬಳಿ ಡ್ರಾಪ್ ಮಾಡಿ ಬಳಿ ತಾನೂ ಕೆಲಸಕ್ಕೆ ಹೋಗಲೆಂದು ಪತ್ನಿ-ಮಕ್ಕಳನ್ನು ಬೈಕ್ನಲ್ಲಿ ಲೋಹಿತ್ ಕರೆದುಕೊಂಡು ಜ.10ರ ಮಂಗಳವಾರ ಬೆಳಗ್ಗೆ ಹೋಗುತ್ತಿದ್ದರು. ದುರಾದೃಷ್ಟವಶಾತ್ ಚಲಿಸುತ್ತಿದ್ದ ಬೈಕ್ ಮೇಲೆ 10.30ರ ಸುಮಾರಿಗೆ ಮೆಟ್ರೋ ಪಿಲ್ಲರ್ ಕುಸಿದಿದ್ದು, ನಾಲ್ವರೂ ಗಂಭೀರ ಗಾಯಗೊಂಡರು. ಕೂಡಲೇ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ತೇಜಸ್ವಿನಿ ಮತ್ತು ಎರಡೂವರೆ ವರ್ಷದ ಮಗ ಮೃತಪಟ್ಟರು. ಲೋಹಿತ್ ಮತ್ತು ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. (ದಿಗ್ವಿಜಯ ನ್ಯೂಸ್)
‘ನಮ್ಮ ಮೆಟ್ರೋ’ ಪಿಲ್ಲರ್ ದುರಂತ: ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಣೆ
ಮೆಟ್ರೋ ಪಿಲ್ಲರ್ ದುರಂತ: ವರ್ಕ್ ಫ್ರಂ ಹೋಮ್ ಒಪ್ಪಿಕೊಂಡಿದ್ದರೆ ಉಳಿಯುತ್ತಿತ್ತೇ ಜೀವ?
ಹುಟ್ಟುಹಬ್ಬದಂದೇ ಸಾವಿನ ಹಾದಿ ಹಿಡಿದ ಯುವತಿ! ಇದ್ದ ಒಬ್ಬ ಮಗಳೂ ದುರಂತ ಸಾವು, ಪಾಲಕರ ಆಕ್ರಂದನ