ಮಂಗಳೂರು: ಕಸ ವಿಂಗಡಣೆ ಕುರಿತು ಜನರಲ್ಲಿ ಅರಿವು ಮೂಡಿಸಲು ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಆಯುಕ್ತ ಅಕ್ಷಿ ಶ್ರೀಧರ್ ಗುರುವಾರ ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದರು.
ಚಿಲಿಂಬಿಯ ಮಥಾಯಿಸ್ ಲೇ ಔಟ್ ಪ್ರದೇಶಕ್ಕೆ ಭೇಟಿ ನೀಡಿದ ಮೇಯರ್ ಹಾಗೂ ಕಮಿಷನರ್, ಕಸ ವಿಂಗಡಿಸದೆ ನೀಡುವುದರಿಂದ ತ್ಯಾಜ್ಯ ವಿಲೇವಾರಿಗೆ ಆಗುತ್ತಿರುವ ಸಮಸ್ಯೆ ಕುರಿತು ವಿವರಿಸಿ, ಹಸಿ ಮತ್ತು ಒಣ ಕಸ ವಿಂಗಡಿಸಿ ನೀಡುವಂತೆ ಮನವರಿಕೆ ಮಾಡಿದರು. ಬಳಿಕ ಪಾಲಿಕೆ ವ್ಯಾಪ್ತಿಯ ಕೆಲವು ಕಪ್ಪು ರಂದ್ರ(black spot area)ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಪರಿಹಾರ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಿಸಿ ಕ್ಯಾಮರಾ: ಈ ನಡುವೆ ವೆಲ್ಸ್ ಪೇಟೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ ಅಧೀನದ ಹಾಸ್ಟೆಲ್ ಮುಂಭಾಗದ ಕಪ್ಪು ರಂಧ್ರ ಪ್ರದೇಶ ಪರಿಶೀಲಿಸಿ ಸದ್ರಿ ಪ್ರದೇಶವನ್ನು ಸ್ವಚ್ಛವಾಗಿ ಇಡಲು ಮುಂಜಾಗ್ರತಾ ಕ್ರಮವಾಗಿ ಸಿ.ಸಿ ಕ್ಯಾಮರಾ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸಂದೀಪ್ ಗರೋಡಿ, ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಸದಸ್ಯರಾದ ಗಣೇಶ್ ಕುಲಾಲ್ ಉಪಸ್ಥಿತರಿದ್ದರು.
ಪ್ರಸ್ತುತ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣೆ ವೈಜ್ಞಾನಿಕವಾಗಿ ನಡೆಯುತ್ತಿದ್ದು, ಜನ ಕಸ ವಿಂಗಡಿಸಿ ನೀಡುವುದರಿಂದ ಪಚ್ಚನಾಡಿಯಲ್ಲಿ ಸಂಸ್ಕರಣ ಕಾರ್ಯ ಸುಲಭವಾಗಿ ನೆರವೇರುತ್ತಿದೆ. ಇದರಿಂದ ತ್ಯಾಜ್ಯವನ್ನು ಶೀಘ್ರ ಗೊಬ್ಬರಕ್ಕೆ ಪರಿವರ್ತಿಸುವಲ್ಲಿ ಸಹಾಯವಾಗುವುದು. ಸಮರ್ಪಕ ಕಸ ವಿಂಗಡಣೆಯಿಂದ ಕಸ ಸಂಗ್ರಹ ಕಡಿಮೆಯಾಗಿ ಕಳೆದ ಬಾರಿ ಲ್ಯಾಂಡ್ ಫಿಲ್ಸೈಟ್ನಲ್ಲಿ ಸಂಭವಿಸಿದ ದುರಂತ ಈ ಬಾರಿ ನಡೆಯದಂತೆ ಕ್ರಮ ವಹಿಸಲು ಸಹಾಯವಾಗಲಿದೆ.
ಪ್ರೇಮಾನಂದ ಶೆಟ್ಟಿ
ಮಂಗಳೂರು ಮೇಯರ್