ನವದೆಹಲಿ: ತ್ರಿಪುರ ವಿರುದ್ಧ ರಣಜಿ ಪಂದ್ಯ ಗೆದ್ದು ಸೂರತ್’ಗೆ ಹೊರಟು ನಿಂತಿತ್ತು ಕರ್ನಾಟಕ ಕ್ರಿಕೆಟ್ ತಂಡ. ಆಟಗಾರರೆಲ್ಲಾ ಅಗರ್ತಾಲದಲ್ಲಿ ಇಂಡಿಗೋ ವಿಮಾನವೇರಿ ಕೂತಿದ್ದರು. ತಂಡದ ನಾಯಕ ಮಯಾಂಕ್ ಅಗರ್ವಾಲ್ ಬಾಯಾರಿಕೆಯಾಗುತ್ತಿದೆ ಎಂದು ತನ್ನ ಸೀಟಿನ ಮುಂಭಾಗದಲ್ಲಿದ್ದ ನೀರಿನ ಬಾಟಲಿಯನ್ನು ಓಪನ್ ಮಾಡಿ ಒಂದು ಗುಟುಕು ಕುಡಿದಿದ್ದಾರೆ ಅಷ್ಟೇ..!
ತಕ್ಷಣವೇ ಬಾಯಿ, ನಾಲಿಗೆ, ಗಂಟಲು ಸುಟ್ಟು ಹೋದ ಅನುಭವ, ಉರಿ ಉರಿ ಅಂತ ಮಯಾಂಕ್ ಕಿರುಚಿಕೊಂಡಿದ್ದಾರೆ. ಏನಾಗುತ್ತಿದೆ ಎಂಬುದು ಗೊತ್ತಾಗುವಷ್ಟರಲ್ಲಿ ಮಯಾಂಕ್ ಅಗರ್ವಾಲ್’ನ ಬಾಯಿ, ನಾಲಿಗೆ, ಗಂಟಲು ಹಾಗೂ ಮುಖದ ಕೆಲ ಭಾಗ ಸುಟ್ಟು ಹೋಗಿತ್ತು. ಯಾಕಂದ್ರೆ ಮಯಾಂಕ್ ಕುಡಿದದ್ದು ನೀರಲ್ಲ, ನೀರಿನ ಬಾಟಲಿಯಲ್ಲಿದ್ದ ಆ್ಯಸಿಡ್ ಅಥವಾ ಆ್ಯಸಿಡ್ನಂಥಾ ವಿಷಕಾರಿ ದ್ರವ. ಹೌದು, ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿದೆ.
‘’ಅದೃಷ್ಟವಶಾತ್ ಮಯಾಂಕ್ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಘಟನೆ ನಡೆದ ಕ್ಷಣದಿಂದ ಒಂದೇ ಒಂದು ಮಾತೂ ಅವರ ಬಾಯಿಂದ ಹೊರ ಬಂದಿಲ್ಲ. ಅರ್ಥಾತ್ ಮಾತನಾಡಲು ಆಗುತ್ತಿಲ್ಲ. ಬಾಯಿ, ನಾಲಿಗೆ, ಹಲ್ಲುಗಳಿಗೆ ಡ್ಯಾಮೇಜ್ ಆಗಿದೆ. ತುಟಿಗಳು ದಪ್ಪನೆ ಊದಿಕೊಂಡಿವೆ ಎಂದು ತಿಳಿದುಬಂದಿದೆ. ವಿಮಾನದಲ್ಲಿ ನೀರಿನ ಬಾಟಲಿ ಇಡುವ ಜಾಗದಲ್ಲಿ ಬೇರೆ ಯಾವುದೋ ಬಾಟಲ್ ಇಡಲಾಗಿದ್ದು ಈ ಘಟನೆಗೆ ಕಾರಣ ಎನ್ನಲಾಗಿದೆ. ನೀರು ಎಂದು ಭಾವಿಸಿದ ಮಯಾಂಕ್ ಅಗರ್ವಾಲ್ ಇದನ್ನು ಕುಡಿದಿದ್ದಾರೆ. ವಿಷಕಾರಿ ಅಂಶ ಮಯಾಂಕ್ ದೇಹದ ಒಳಗೆ ಸೇರಿರುವ ಸಾಧ್ಯತೆ ಕಡಿಮೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.
ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ವಿಮಾನ ಅಗರ್ತಲಕ್ಕೆ ಹಿಂದಿರುಗಿದ್ದನ್ನು ‘ಇಂಡಿಗೋ’ ಖಚಿತಪಡಿಸಿದೆ. ಅಗರ್ತಲದಲ್ಲಿ ಮಯಾಂಕ್ರನ್ನು ಆಸ್ಪತ್ರೆಗೆ ಸೇರಿಸಿದ ಬಳಿಕ ‘ಇಂಡಿಗೋ ವಿಮಾನ 6ಇ 5177’ ಸಂಜೆ 4.20ಕ್ಕೆ ಮತ್ತೆ ದೆಹಲಿಗೆ ತೆರಳಿತು ಎನ್ನಲಾಗಿದೆ. ಮಯಾಂಕ್ ಟೀಮ್ ಇಂಡಿಯಾ ಪರ 21 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಮಯಾಂಕ್ ದಿಢೀರ್ ಅಸ್ವಸ್ಥ, ಅಪಾಯದಿಂದ ಪಾರು: ಸ್ಪಷ್ಟನೆ ನೀಡಿದ ಇಂಡಿಗೋ ಏರ್ಲೈನ್ಸ್
ಪ್ರೇಕ್ಷಕರು ನನ್ನ ಕೂದಲು, ಬಟ್ಟೆ ಬಗ್ಗೆ ಕಾಮೆಂಟ್ ಮಾಡ್ತಾರೆ: ಚೆಸ್ ಆಟಗಾರ್ತಿ ದಿವ್ಯಾ ದೇಶ್ಮುಖ್ ಬೇಸರ