ಸಿಡ್ನಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಸೂಕ್ತವಾಗಿ ಅಂಪೈರ್ ತೀರ್ಪು ವಿಮರ್ಶೆ (ಡಿಆರ್ಎಸ್) ತೆಗೆದುಕೊಳ್ಳಲು ಪದೆ ಪದೆ ವಿಫಲರಾಗುತ್ತಿರುತ್ತಾರೆ. ಇದಕ್ಕೆ ಮಂಗಳವಾರ ಮತ್ತೊಮ್ಮೆ ಸಾಕ್ಷಿಯಾದರು. ಸೂಕ್ತ ವೇಳೆಯಲ್ಲಿ ಡಿಆರ್ಎಸ್ ಪಡೆಯದ ಹಿನ್ನೆಲೆಯಲ್ಲಿ ಆಸೀಸ್ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್ಗೆ ಜೀವದಾನ ನೀಡಿದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು. ಮ್ಯಾಥ್ಯೂ ವೇಡ್ 35 ಎಸೆತಗಳಲ್ಲಿ 50 ರನ್ಗಳಿಸಿದ್ದ ವೇಳೆ ನಟರಾಜನ್ ಎಸೆದ ಇನಿಂಗ್ಸ್ನ 11ನೇ ಓವರ್ನಲ್ಲಿ ಎಲ್ಬಿಗಾಗಿ ಮನವಿ ಸಲ್ಲಿಸಲಾಯಿತು. ಆದರೆ, ಅಂಪೈರ್ ಭಾರತದ ಮನವಿ ತಿರಸ್ಕರಿಸಿದರು. ಈ ವೇಳೆ ತಕ್ಷಣವೇ ಡಿಆರ್ಎಸ್ ಮೊರೆ ಹೋಗುವ ಬದಲಿಗೆ ಆಟಗಾರರು ಮೈದಾನದಲ್ಲೇ ಚರ್ಚಿಸಲು ಮುಂದಾದರು.
ಬಳಿಕ ಡಿಆರ್ಎಸ್ಗೆ ಮನವಿ ಮಾಡಿದರೂ 15 ಸೆಕೆಂಡ್ ಮೀರಿದ ಹಿನ್ನೆಲೆಯಲ್ಲಿ ಅಂಪೈರ್ ಕೊಹ್ಲಿ ಮನವಿಯನ್ನು ಪುರಸ್ಕರಿಸಲಿಲ್ಲ. ನಂತರ ಟಿವಿ ರಿಪ್ಲೇಯಲ್ಲಿ ಚೆಂಡು ನೇರವಾಗಿ ವಿಕೆಟ್ ಬಡಿದಿತ್ತು. ಡಿಆರ್ಎಸ್ ಅವಕಾಶ ಕೈಚೆಲ್ಲಿದ ಭಾರತ ವೇಡ್ಗೆ ಜೀವದಾನ ನೀಡಿತು. ಬಳಿಕ ವೇಡ್ ಹೆಚ್ಚುವರಿ 30 ರನ್ ಸಿಡಿಸಿದ್ದು ಭಾರತಕ್ಕೆ ದುಬಾರಿಯಾಯಿತು. ‘ಇಂಥ ತಪ್ಪುಗಳಿಗೆ ಕ್ಷಮೆ ಇಲ್ಲ. ದೊಡ್ಡ ಪಂದ್ಯಗಳಲ್ಲಿ ಇಂಥ ತಪ್ಪುಗಳು ಸಂಭವಿಸಬಾರದು’ ಎಂದು ಪಂದ್ಯ ಬಳಿಕ ಕೊಹ್ಲಿ ಹೇಳಿದರು.
ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಡಿಆರ್ಎಸ್ ತೆಗೆದುಕೊಳ್ಳಲು ಅವಕಾಶ ನೀಡದ ಮೈದಾನದ ಅಂಪೈರ್ ವಿರುದ್ಧ ಕೊಹ್ಲಿ ಗರಂ ಆದ ಪ್ರಸಂಗವೂ ನಡೆಯಿತು.
Party time in Sydney! #AUSvIND pic.twitter.com/NobrHRcsHx
— cricket.com.au (@cricketcomau) December 8, 2020