ಗುಬ್ಬಿ : ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ನಿರ್ಲಕ್ಷ್ಯ ತಾಳಿರುವುದನ್ನು ಒಕ್ಕಲಿಗ ಮುಖಂಡರು ಪ್ರಶ್ನಿಸುತ್ತಿದ್ದಾರೆ. ಮಂಡ್ಯ, ಹಾಸನ, ಮೈಸೂರು ಮತ್ತು ತುಮಕೂರು ಜಿಲ್ಲೆಯ ಒಕ್ಕಲಿಗ ಶಾಸಕರನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿ.ಎಸ್.ಪುರ ಹೋಬಳಿ ಅಂಕಳಕೊಪ್ಪ ಗ್ರಾಮದಲ್ಲಿ ಹೇಮಾವತಿ ನಾಲಾ ಅಭಿವೃದ್ಧಿ ವಿಶೇಷ ಅನುದಾನ ಯೋಜನೆಯ 2 ಕೋಟಿ ರೂಪಾಯಿ ವೆಚ್ಚದ ಸಿಸಿ ರಸ್ತೆ ಮತ್ತು ಡಾಂಬರೀಕರಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ಸೇರಿ ಪ್ರೀತಂಗೌಡ, ನಾಗೇಂದ್ರ ಮೂವರಲ್ಲಿ ಒಬ್ಬರಿಗೆ ಮನ್ನಣೆ ನೀಡಬಹುದಿತ್ತು. ಈ ಬಗ್ಗೆ ಹಳೇ ಮೈಸೂರು ಭಾಗದ ಒಕ್ಕಲಿಗ ಮುಖಂಡರು ನನಗೆ ನೇರವಾಗಿ ಪ್ರಶ್ನಿಸುತ್ತಿರುವುದು ಇರಿಸುಮುರಿಸು ಉಂಟಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಚರ್ಚಿಸಿ ಗಮನಕ್ಕೆ ತಂದಿದ್ದೇವೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಮುಖ್ಯಮಂತಿ ಭೇಟಿ ಬಗ್ಗೆ ಅಸಮಾಧಾನ ಹೊರಹಾಕಿರುವ ಶಾಸಕ ಪ್ರೀತಂಗೌಡ ಅವರ ಹೇಳಿಕೆಗೆ ಸಾಥ್ ನೀಡುತ್ತೇನೆ. ಬಿಜೆಪಿ ಕಾರ್ಯಕರ್ತರಲ್ಲಿ ಈ ಬಗ್ಗೆ ಸಾಕಷ್ಟು ಬೇಸರ ತಂದಿದೆ. ಪ್ರತಿ ಚುನಾವಣೆಯಲ್ಲೂ ಜೆಡಿಎಸ್ ವಿರುದ್ಧ ಹೋರಾಟ ಮಾಡುವ ಕಾರ್ಯಕರ್ತರಿಗೆ ಈ ಭೇಟಿ ಮುಜುಗರ ತಂದಿದೆ. ಅವರು ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಿರುವುದು ಸಂತಸ ತಂದಿದೆ. ಅಭಿವೃದ್ಧಿ ಕೆಲಸಗಳಿಗೆ ಸಚಿವರು ಸಹಕಾರ ನೀಡಲಿದ್ದಾರೆ. ಯಡಿಯೂರಪ್ಪ ಅವರಂತೆ ಬೊಮ್ಮಾಯಿ ಸಹ ಅಭಿವೃದ್ಧಿಗೆ ಮಾನ್ಯತೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ಮಹೇಶ್, ಕುಮಾರ್, ಕಿರಣ್, ಮದುವೆ ಮನೆ ಕುಮಾರ್, ಗುತ್ತಿಗೆದಾರ ರಾಮಲಿಂಗೇಗೌಡ ಇತರರು ಇದ್ದರು.
ಲಾಭಿಗಾಗಿ ದೆಹಲಿಗೆ ಹೋಗಿಲ್ಲ : ಐದಾರು ಬಾರಿ ಶಾಸಕರಾದವರು ಸಚಿವರಾಗಿದ್ದಾರೆ. ಖಾತೆ ಹಂಚಿಕೆ ವಿಚಾರದಲ್ಲಿ ಎಂಟಿಬಿ ನಾಗರಾಜ್ ಮತ್ತು ಆನಂದ್ಸಿಂಗ್ ಅವರಲ್ಲಿನ ಅಸಮಾಧಾನ ಶಮನಗೊಳಿಸುವ ಕೆಲಸ ಮಾಡಲಾಗುತ್ತದೆ. ಸಚಿವ ಸ್ಥಾನಕ್ಕೆ ಲಾಭಿ ಮಾಡಲು ನಾನು ದೆಹಲಿಗೆ ಹೋಗಿಲ್ಲ. ವೈಯಕ್ತಿಕ ವ್ಯವಹಾರಕ್ಕೆ ಹೋಗಿ ಮರಳಿದೆ ಬಂದೆ. ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಹೇಮೆ ಹರಿಸಿಕೊಳ್ಳುವ ವಿಚಾರದಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಬಾರದು. ಸರಾಗವಾಗಿ ನೀರು ಹರಿಯುವ ನಾಲೆಗೆ ಅಡ್ಡಿಪಡಿಸಲು ಮರಗಿಡಗಳನ್ನು ತುಂಬುವ ಕಾರ್ಯ ಮಾಡಿದ್ದ್ಯಾರು ಎಂಬುದು ತಿಳಿದುಕೊಳ್ಳಲಿ. ನಾಲೆಯಿಂದ ನೀರು ಹರಿಸಿಕೊಳ್ಳಲು ಖುದ್ದು ನಾನೇ ಮುಂದೆ ನಿಂತು ನಾಲೆ ಅಚ್ಚಕಟ್ಟು ಮಾಡಿರುವುದಾಗಿ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.