ತುಮಕೂರು: ರಾತ್ರಿ ಮನೆಯಲ್ಲಿದ್ದ ಮಹಿಳೆ ಬೆಳಗ್ಗೆ ಪಕ್ಕದ ತೋಟದಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ಕೊಲೆಯಾದ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದಿದ್ದಾನೆ. ಮಾತ್ರವಲ್ಲ, ಕೊಲೆಗೆ ಕಾರಣವೇನು ಎಂಬುದೂ ಬಹಿರಂಗಗೊಂಡಿದೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಬಳಿಯ ಕುರುಬರಹಳ್ಳಿಯ ಆಶಾ (29) ಸಾವಿಗೀಡಾದಾಕೆ. ಈಕೆ ಕುರುಬರಹಳ್ಳಿ ಗ್ರಾಮದ ರವಿಕುಮಾರ್ ಎಂಬಾತನನ್ನು ಇತ್ತೀಚೆಗಷ್ಟೇ ಮದುವೆಯಾಗಿದ್ದಳು. ಆದರೆ ನಿನ್ನೆ ರಾತ್ರಿ ಮನೆಯಲ್ಲಿದ್ದ ಆಶಾ, ಇಂದು ಬೆಳಗ್ಗೆ ಪಕ್ಕದ ತೋಟದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಇಂದು ಬೆಳಗ್ಗೆ ಗ್ರಾಮಸ್ಥರು ಶವವನ್ನು ನೋಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಆಶಾ ತಲೆಗೆ ಯಾವುದೋ ವಸ್ತುವಿಂದ ಬಲವಾಗಿ ಹೊಡೆದು ಕೊಲೆ ಮಾಡಿರುವುದು ಕಂಡುಬಂದಿತ್ತು. ಸ್ಥಳಕ್ಕೆ ತುರುವೇಕೆರೆ ತಾಲೂಕಿನ ದಂಡಿನಶಿವರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಕೊಲೆಯಾದ ಕೆಲವೇ ಗಂಟೆಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ವೆಂಕಟೇಶ್ (32) ಎಂಬಾತನನ್ನು ಬಂಧಿಸಿದ್ದಾರೆ. ಆಶಾ ಹಾಗೂ ವೆಂಕಟೇಶ್ ಮಧ್ಯೆ ಅನೈತಿಕ ಸಂಬಂಧ ಇರುವುದು ತಿಳಿದುಬಂದಿದೆ. ಅಲ್ಲದೆ, ನಿನ್ನೆ ರಾತ್ರಿ ಹಣಕಾಸು ವಿಚಾರಕ್ಕೆ ವೆಂಕಟೇಶ್ ಹಾಗೂ ಆಶಾ ನಡುವೆ ಗಲಾಟೆ ನಡೆದಿದೆ. ಆಗ ಆಶಾಳ ತಲೆಗೆ ಬಲವಾಗಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿ, ಬಳಿಕ ಆಶಾ ಮನೆ ಪಕ್ಕದಲ್ಲೇ ಇರೋ ಹಳ್ಳದಲ್ಲಿ ಶವ ಎಸೆದು ವೆಂಕಟೇಶ್ ಪರಾರಿಯಾಗಿದ್ದ.
ಆರೋಪಿ ವೆಂಕಟೇಶ್ ಕೊಲೆಗೀಡಾದ ಆಶಾಳ ಪಕ್ಕದ ಮನೆಯ ನಿವಾಸಿ. ಈಕೆ 12 ವರ್ಷದ ಹಿಂದೆ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಗ್ರಾಮದ ನಿವಾಸಿ ರವಿಕುಮಾರ್ ಎಂಬಾತನನ್ನು ಮದುವೆ ಆಗಿದ್ದಳು. ವಿವಾಹದ ಬಳಿಕ ಗಂಡನ ಜೊತೆ ತವರು ಮನೆಯಲ್ಲೇ ವಾಸವಿದ್ದಳು. ದಂಪತಿಗೆ ಎರಡು ಗಂಡು ಮಕ್ಕಳಿದ್ದು, ಆರೋಪಿ ವೆಂಕಟೇಶ್ ಜೊತೆ ಮದುವೆಗೂ ಮುನ್ನವೇ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಅಲ್ಲದೆ ಮದುವೆಯಾಗಿ ಮಕ್ಕಳಿದ್ದರೂ ಅನೈತಿಕ ಸಂಬಂಧ ಮುಂದುವರಿಸಿದ್ದಳು ಎಂಬುದು ವಿಚಾರಣೆಯಲ್ಲಿ ಕಂಡುಬಂದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪರೀಕ್ಷೆಗೆಂದು ಬ್ಲಡ್ ಡ್ರಾ ಮಾಡುತ್ತಿದ್ದಾಗಲೇ ನವಜಾತ ಶಿಶು ಸಾವು!; ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ-ಆಕ್ರೋಶ..
ರೈಲಲ್ಲಿ ಪ್ಲಾಸ್ಟಿಕ್ ಕವರ್ನೊಳಗೆ ಮೈಮುಚ್ಚಿಕೊಂಡು ಬಾಳೆಹಣ್ಣು ತಿಂದ ಮಹಿಳೆ!; ಅಷ್ಟಕ್ಕೂ ಆಕೆ ಹಾಗೆ ಮಾಡಿದ್ದೇಕೆ?