ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಆಯನೂರು ಸಮೀಪದ ಮಂಡಗಟ್ಟ ನಗರ ರಸ್ತೆಯಲ್ಲಿ ಬುಧವಾರ ನಡೆದಿದೆ.
ಕುಂಸಿ ಠಾಣೆ ಪಿಎಸ್ಐ ನವೀನ್ ಮಠಪತಿ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಬಸವಂತಪ್ಪ ಮೇಲೆ ಹಲ್ಲೆ ನಡೆದಿದ್ದು, ಪಿಎಸ್ಐಗೆ ಗಂಭೀರ ಗಾಯವಾಗಿದ್ದು, ಪಿಸಿಗೆ ಕೈ ಮುರಿತವಾಗಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ಮಂಡಘಟ್ಟದ ಮಧು ಹಾಗೂ ಮನು ಎಂಬುವರನ್ನು ಬಂಧಿಸಲು ಹೋದಾಗ ಘಟನೆ ನಡೆದಿದೆ.
ಆರೋಪಿಗಳ ಮನೆಗೆ ಪೊಲೀಸರು ದಾಳಿ ಮಾಡುತ್ತಿದ್ದಂತೆ ಪಿಎಸ್ಐ ತಲೆಗೆ ಆರೋಪಿಗಳು ಮಾರಕಾಸ್ತ್ರದಿಂದ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ಪಿಎಸ್ಐ ಸ್ಥಳದಲ್ಲೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಅವರನ್ನು ರಕ್ಷಿಸಲು ಮುಂದಾದ ಪಿಸಿ ಬಸವಂತಪ್ಪ ಮೇಲೆಯೂ ಹಲ್ಲೆ ಮಾಡಿದ್ದಾರೆ.
ಕೂಡಲೇ ಇಬ್ಬರನ್ನು ಸ್ಥಳೀಯರು ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಿಎಸ್ಐ ನವೀನ್ ಮಠಪತಿ ಇದೀಗ ಚೇತರಿಸಿಕೊಂಡಿದ್ದಾರೆ. ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗಿದ್ದು, ಈ ಹಿನ್ನೆಲೆಯಲ್ಲಿ ಪಿಎಸ್ಐ ನಿರಂತರ ಕಾರ್ಯಾಚರಣೆಗಿಳಿದಿದ್ದರು.
ಮಂಡಘಟ್ಟ ಗ್ರಾಮದಲ್ಲಿಯೂ ದಾಳಿ ನಡೆಸಿ ನೂರಾರು ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು. ಪಿಎಸ್ಐ ಮೇಲೆ ದಾಳಿ ನಡೆಸಿದ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. (ದಿಗ್ವಿಜಯ ನ್ಯೂಸ್)