ಶಿಕಾರಿಪುರ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಮಹಾರಾಷ್ಟ್ರ ಡಿಸಿಎಂ ಹೇಳಿಕೆ ಖಂಡಿಸಿ ಕರವೇ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ಯಲ್ಲಪ್ಪ ಮಾತನಾಡಿ, ಕನ್ನಡಿಗರ ಸ್ವಾಭಿಮಾನ ಕೆಣಕುವ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಸರಿಯಲ್ಲ. ಕನ್ನಡ ರಾಜ್ಯೋತ್ಸವದ ದಿನ ಬೆಳಗಾವಿ, ನಿಪ್ಪಾಣಿಯಲ್ಲಿ ಕರಾಳ ದಿನ ಆಚರಿಸುತ್ತಾರೆ. ತಕ್ಷಣ ರಾಜ್ಯ ಸರ್ಕಾರ ಈ ನಿರ್ಧಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸೊಲ್ಲಾಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಆದರೆ ಅವರಿಗಾಗಿ ಮಹಾರಾಷ್ಟ್ರ ಸರ್ಕಾರ ಏನೂ ಮಾಡಿಲ್ಲ. ಅಲ್ಲಿ ಕನ್ನಡಿಗರನ್ನು ಉಪೇಕ್ಷೆ ಮಾಡಲಾಗುತ್ತಿದೆ. ಆದರೆ ಕರ್ನಾಟಕ ಸರ್ಕಾರ ಅವರಿಗೆ ಅಭಿವೃದ್ಧಿ ಪ್ರಾಧಿಕಾರ ಮಾಡುವ ರಚಿಸುವ ಮೂಲಕ ಅವಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಕಾರವಾರ ಮತ್ತು ಬೆಳಗಾವಿ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಕನ್ನಡಿಗರು ಸಹಿಷ್ಣುಗಳು ಆದರೆ ನೆಲ, ಜಲ ಭಾಷೆಗೆ ಆಪತ್ತು ಬಂದರೆ ನಾವು ಹೋರಾಟಕ್ಕೂ ಸಿದ್ಧ. ಜಾತಿಗೊಂದರಂತೆ ಅಭಿವೃದ್ಧಿ ನಿಗಮ ಮಾಡುವುದಕ್ಕಿಂತ ಆರ್ಥಿಕವಾಗಿ ಹಿಂದುಳಿದವರಿಗೆ ನಿಗಮ ಸ್ಥಾಪಿಸಲಿ ಎಂದು ಸಲಹೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಪರಮೇಶ್, ಉಪಾಧ್ಯಕ್ಷ ಜಿದ್ದು ಮಂಜುನಾಥ ರಾವ್, ನಗರಾದ್ಯಕ್ಷ ರವಿ ಭಂಡಾರಿ, ಸುರೇಶ್ ನಾಯ್್ಕ ರವಿಕಿರಣ್, ಎಂ.ಪ್ರಕಾಶ್, ದೊಡ್ಡೇಶ್, ಮಂಜುನಾಥ್, ಶಿವರಾಜ್, ಮಧು ಇತರರಿದ್ದರು.