ಮಾನ್ವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ ಪಾಸ್ವರ್ಡ್ ದುರ್ಬಳಕೆ ಮಾಡಿಕೊಂಡು ಹಣ ಪಡೆಯುತ್ತಿದ್ದ ಪಟ್ಟಣದ 3 ಖಾಸಗಿ ಕಂಪ್ಯೂಟರ್ ಸೆಂಟರ್ಗಳ ಮೇಲೆ ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ್ ಸೋಮವಾರ ದಾಳಿ ನಡೆಸಿ ಅಂಗಡಿ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ ಯಾವುದೇ ಶುಲ್ಕವಿಲ್ಲದೆ ಗ್ರಾಮ ಓನ್, ಕರ್ನಾಟಕ ಓನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಆದೇಶಿಸಿದೆ. ಆದರೆ ತಾಲೂಕಿನ ಸಾದಾಪೂರು ಮತ್ತು ಕುರ್ಡಿ ಗ್ರಾಮಗಳ ಗ್ರಾಮ ಓನ್ ಕೇಂದ್ರದ ಪಾಸ್ವರ್ಡ್ ಬಳಸಿಕೊಂಡು ಪ್ರತಿ ಅರ್ಜಿಗೆ 200 ರೂ. ಪಡೆಯುತ್ತಿದ್ದ ಖಚಿತ ಮಾಹಿತಿಯೊಂದಿಗೆ ತಹಸೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಮಾಹಿತಿ ಹೊರಬಂದಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯಲ್ಲಿ ದುಡ್ಡು ಪಡೆದರೆ ಕ್ರಿಮಿನಲ್ ಪ್ರಕರಣ: ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ
ಪಾಸ್ವರ್ಡ್ ಬಳಸಿಕೊಂಡು ಹಣ ವಸೂಲಿ ಮಾಡಿದವ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪಾಸ್ವರ್ಡ್ ನೀಡಿದ ಗ್ರಾಮ್ಓನ್ ಕೇಂದ್ರದವ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು. ಪಾಸ್ವರ್ಡ್ ದುರ್ಬಳಕೆ ಮಾಡಿಕೊಂಡು ಅರ್ಜಿಗೆ ಹಣ ಪಡೆಯುತ್ತಿದ್ದ ಅಂಗಡಿಗಳನ್ನು ಸೀಜ್ ಮಾಡಲಾಗಿದೆ ಎಂದು ತಹಸೀಲ್ದಾರ್ ಚಂದ್ರಕಾಂತ್ ತಿಳಿಸಿದರು.
ದಾಳಿ ವೇಳೆ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ವಾಹಿದ್, ಸಿಡಿಪಿಒ ಇಲಾಖೆಯ ಮಹ್ಮದ್, ವಿಎ ಪ್ರಭಾಕರ್ ಇತರರಿದ್ದರು.