ಮಾನ್ವಿ: ತಪ್ತ ಮುದ್ರಧಾರಣೆಯಿಂದ ದೇಹ ಮತ್ತು ಮನಸ್ಸು ಪವಿತ್ರವಾಗುತ್ತದೆ. ಚಾತುರ್ಮಾಸದಲ್ಲಿ ಮಾಡುವ ವೃತಗಳು ಹಾಗೂ ಪೂಜೆಗಳು ಪೂರ್ಣಫಲ ನೀಡುತ್ತವೆ ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧೀಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.
ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ಭಕ್ತರಿಗೆ ತಪ್ತಮುದ್ರಾಧಾರಣೆ ಆನುಗ್ರಹ ಸಂದೇಶ ನೀಡಿದರು. ಚಾತುರ್ಮಾಸದಲ್ಲಿ ಎರಡು ಕೈಗಳ ಮೇಲೆ ಶಂಖ ಮತ್ತು ಚಕ್ರ ಚಿಹ್ನೆ ಹೊಂದಿರುವ ತಪ್ತ ಮುದ್ರೆ ಹಾಕಿಸಿಕೊಂಡು ವಿಷ್ಣುವಿಗೆ ಪ್ರಿಯರಾದ ಭಕ್ತರಾಗಬೇಕು. ಚಾತುರ್ಮಾಸದ ಅಂಗವಾಗಿ ಮಂತ್ರಾಲಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು. ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ ಕಾರ್ಯಕ್ರಮ ನಡೆಯಿತು. ವಿಪ್ರ ಸಮಾಜದ ತಾಲೂಕು ಅಧ್ಯಕ್ಷ ಮುದ್ದುರಂಗಪ್ಪ ಹಾಗೂ ಇತರರಿದ್ದರು.