ಮಂಗಳೂರು: ಬಹುನಿರೀಕ್ಷಿತ ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ಹಾಗೂ ಮೂಡುಬಿದಿರೆ-ಮಂಗಳೂರು ಹೆದ್ದಾರಿಗೆ ಗುತ್ತಿಗೆದಾರರನ್ನು
ಅಂತಿಮ ಗೊಳಿಸಲಾಗಿದ್ದರೂ ಮಳೆಗಾಲದ ಬಳಿಕವೇ ಕಾಮಗಾರಿ ಶುರುವಾಗಲಿದೆ.
ಪ್ರಸ್ತುತ ಸರ್ವೇ, ಅಗತ್ಯ ಸಾಮಗ್ರಿಗಳ ಶೇಖರಣೆ, ಪ್ಲಾಂಟ್ ಸ್ಥಾಪನೆಗೆ ಬೇಕಾದ ಪೂರ್ವಸಿದ್ಧತೆಯಲ್ಲಿ ಗುತ್ತಿಗೆದಾರರು ತೊಡಗಿಸಿಕೊಂಡಿದ್ದಾರೆ. ಅವರಿಗೆ ವರ್ಕ್ ಆರ್ಡರ್ ನೀಡಿದ ದಿನದಿಂದ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ.
ಅಡ್ಡಹೊಳೆ-ಬಿ.ಸಿ.ರೋಡ್ ಮಧ್ಯೆ ಎರಡು ಪ್ರತ್ಯೇಕ ಭಾಗಗಳಲ್ಲಿ ಕಾಮಗಾರಿಯನ್ನು ಇಬ್ಬರು ಗುತ್ತಿಗೆದಾರರು ನಿರ್ವಹಿಸಲಿದ್ದಾರೆ. ಕಳೆದ ಬಾರಿ ಎಲ್ಎಂಡ್ಟಿ ಕಂಪನಿ ಅರ್ಧಕ್ಕೆ ಬಿಟ್ಟು ಹೋಗಿದ್ದ ಕಾಮಗಾರಿ ಮುಂದುವರಿಯಲಿದೆ.
ಅಡ್ಡಹೊಳೆಯಿಂದ ಪೆರಿಯಶಾಂತಿವರೆಗಿನ ಅರಣ್ಯಭಾಗದಲ್ಲಿ ಈ ಟೆಂಡರ್ನ ಭಾಗವೂ ಒಳಗೊಂಡಿದ್ದು ಅದಕ್ಕೆ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಪಡೆದಯಲು ಸಾಧ್ಯವಾಗದ ಹಿನ್ನೆಲೆ ಆ ಭಾಗ ಹೊರತುಪಡಿಸಿ, ಉಳಿದ ಭಾಗ ಮುಂದುವರಿಸುವಂತೆ ಹೆದ್ದಾರಿ ಪ್ರಾಧಿಕಾರ ಎಲ್ಎಂಡ್ಟಿಗೆ ಸೂಚಿಸಿತ್ತು. ಅದಕ್ಕೆ ಒಪ್ಪದೆ, ನಷ್ಟದ ಕಾರಣ ನೀಡಿ ಅರ್ಧಕ್ಕೆ ಬಿಟ್ಟಿದ್ದರು.
ಈ ಬಾರಿ ಅಡ್ಡಹೊಳೆ-ಪೆರಿಯಶಾಂತಿ ಭಾಗವನ್ನು ಪ್ರತ್ಯೇಕವಾಗಿ ಸರ್ವೇ ಮಾಡಿ ಡಿಪಿಆರ್ ಮಾಡಿದ ಬಳಿಕ ಪ್ರತ್ಯೇಕ ಟೆಂಡರ್ ಕರೆಯಲಾಗಿತ್ತು. ಮಹಾರಾಷ್ಟ್ರದ ಎಸ್.ಎಂ.ಅಠವಡೆ ಗುತ್ತಿಗೆದಾರರಾಗಿ ಆಯ್ಕೆಯಾಗಿದ್ದು, ಯೋಜನೆಯ ಮೊತ್ತ 442 ಕೋಟಿ ರೂ. ಪೆರಿಯ ಶಾಂತಿಯಿಂದ ಬಿ.ಸಿ.ರೋಡ್ವರೆಗಿನ ಭಾಗವನ್ನು 1480 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುವ ಪ್ಯಾಕೇಜ್ಗೆ ಹೈದರಾಬಾದ್ ಮೂಲದ ಕೆಎನ್ಆರ್ ಕನ್ಸ್ಟ್ರಕ್ಶನ್ಸ್ ಗುತ್ತಿಗೆದಾರರಾಗಿದ್ದಾರೆ.
ಕಾರ್ಕಳ-ಕುಲಶೇಖರ ಭಾಗಕ್ಕೂ ಗುತ್ತಿಗೆ: ಮಂಗಳೂರಿನ ಕುಲಶೇಖರದಿಂದ ಸಾಣೂರುವರೆಗಿನ 45 ಕಿ.ಮೀ ಉದ್ದದ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ದಿಲೀಪ್ ಬಿಲ್ಡ್ಕಾನ್ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ. ಈ ಭಾಗದಲ್ಲಿ ಪರಿಹಾರ ವಿತರಣೆ ಕಾರ್ಯ ಆರಂಭಗೊಂಡಿದೆ, ಅದಕ್ಕೆ ಕೆಲವು ಆಕ್ಷೇಪಗಳಿರಬಹುದು, ಆದರೆ ಆದ್ಯತೆ ಮೇರೆಗೆ ಅವುಗಳನ್ನು ಪರಿಹರಿಸಿ ಮುಂದುವರಿಯಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶುಮೋಹನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಅಡ್ಡಹೊಳೆ-ಪೆರಿಯಶಾಂತಿ
ಉದ್ದ : 15 ಕಿ.ಮೀ, ಯೋಜನಾ ಮೊತ್ತ: 442 ಕೋಟಿ ರೂ.
4 ಕಿರು ಸೇತುವೆ, 72 ಮೋರಿ.
1 ವನ್ಯಜೀವಿ ಅಂಡರ್ಪಾಸ್
ಪೆರಿಯಶಾಂತಿ-ಬಿ.ಸಿ.ರೋಡ್
ಉದ್ದ: 48 ಕಿ.ಮೀ, ಮೊತ್ತ: 1480 ಕೋಟಿ ರೂ.
2 ದೊಡ್ಡ ಸೇತುವೆ, 15 ಕಿರುಸೇತುವೆ
ಕಲ್ಲಡ್ಕದಲ್ಲಿ ಫ್ಲೈಓವರ್
ಟೋಲ್ ಪ್ಲಾಜಾ 1
ಕುಲಶೇಖರ-ಕಾರ್ಕಳ
45 ಕಿ.ಮೀ, 877 ಕೋಟಿ ರೂ.
ಟೋಲ್ ಪ್ಲಾಜಾ: 1
2 ದೊಡ್ಡ ಸೇತುವೆ , 6 ಕಿರುಸೇತುವೆ